ಚಿಕ್ಕಮಗಳೂರು: ಕಾಳು ಮೆಣಸು ಬೆಳೆಗಾರರ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳುವುದಾಗಿ ಕೇಂದ್ರ ವಾಣಿಜ್ಯ ಸಚಿವ ಸುರೇಶ್ಪ್ರಭು ಭರವಸೆ ನೀಡಿದ್ದಾರೆ ಎಂದು ಕಾಳು ಮೆಣಸು ಸಮನ್ವಯ ಸಮಿತಿಯ ಸಂಚಾಲಕ ಮತ್ತು ಅಡಿಕೆ ಮಾರಾಟ ಫೆಡರೇಷನ್ ಅಧ್ಯಕ್ಷ ಕೊಂಕೋಡಿ ಪದ್ಮನಾಭ ತಿಳಿಸಿದ್ದಾರೆ.
ಕಾಳು ಮೆಣಸು ಬೆಳೆಗಾರ ಸಮ ನ್ವಯ ಸಮಿತಿಯು ಈಚೆಗೆ ನವ ದೆಹಲಿಯಲ್ಲಿ ಸಚಿವ ಸುರೇಶ್ ಪ್ರಭು ಅವರನ್ನು ಭೇಟಿ ಮಾಡಿತ್ತು. ಬೆಳೆಗಾರರ ಬೇಡಿಕೆಗಳ ಮನವಿ ಪತ್ರವನ್ನು ಸಚಿವ ಗೆ ಸಲ್ಲಿಸಲಾಯಿತು ಎಂದು ತಿಳಿಸಿದ್ದಾರೆ.
‘ವಿಯೆಟ್ನಾಂನಿಂದ ಆಮದಾಗುವ ಕಾಳು ಮೆಣಸನ್ನು ಕಡ್ಡಾಯವಾಗಿ ರಸಾಯನಿಕ ಪರೀಕ್ಷೆಗೆ ಒಳಪಡಿಸಬೇಕು. ಶ್ರೀಲಂಕಾದಿಂದ ಅಮದಾಗುವ ಕಾಳು ಮೆಣಸು ವಿಯೆಟ್ನಾಂದಾಗಿದ್ದು ಮೂಲ ಪರಿಶೋಧಿಸಬೇಕು. ಶ್ರೀಲಂಕಾದಲ್ಲಿ ಬೆಳೆಯುವ ಕಾಳು ಮೆಣಸಿಗಿಂತ ಹೆಚ್ಚಿಗೆ ಪ್ರಮಾಣದ ಕಾಳು ಮೆಣಸು ರಫ್ತು ಮಾಡುತ್ತಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಬಾಂಗ್ಲಾದಿಂದ ಅಕ್ರಮವಾಗಿ ವಿಯೆಟ್ನಾಂ ಕಾಳುಮೆಣಸು ಭಾರತಕ್ಕೆ ನುಗ್ಗಿಸುತ್ತಿದ್ದು ಅದನ್ನು ತಡೆಯುವ ಕ್ರಮ ಕೈಗೊಳ್ಳಬೇಕು.
ಶ್ರೀಲಂಕಾದಿಂದ ಆಮದಾಗುವ ಕಾಳು ಮೆಣಸು ವ್ಯವಹಾರದಲ್ಲಿ ಕೋಟ್ಯಂತರ ರೂಪಾಯಿ ತೆರಿಗೆ ವಂಚನೆ ಆಗುತ್ತಿದ್ದು ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಕಾಳು ಮೆಣಸು ಬೆಳೆಯದ ದೇಶಗಳಾದ ಜರ್ಮನಿ, ಸ್ಮೈನ್, ಇಟಲಿ ಹೆಸರಿನಲ್ಲಿ ಆಮದಾಗುತ್ತಿದ್ದು ಇದರಲ್ಲಿ ಅವ್ಯವಹಾರ ನಡೆಯುತ್ತಿರುವ ಗುಮಾನಿ ಇದೆ ಎಂಬ ಅಂಶಗಳನ್ನು ಸಚಿವರ ಗಮನಕ್ಕೆ ತರಲಾಗಿದೆ’ ಎಂದು ತಿಳಿಸಿದ್ದಾರೆ.