ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀವ್ ಗಾಂಧಿ ಸಬ್‌ಮಿಷನ್‌ಗೆ ಕಾಯಕಲ್ಪ

Last Updated 17 ಜನವರಿ 2018, 9:06 IST
ಅಕ್ಷರ ಗಾತ್ರ

ಮಾಯಕೊಂಡ: ಇಲ್ಲಿನ ರಾಜೀವ್ ಗಾಂಧಿ ಸಬ್‌ಮಿಷನ್‌ ಯೋಜನೆಯಡಿ ನಿರ್ಮಾಣಗೊಂಡ ನೀರಿನ ಘಟಕದ ಪುನಶ್ಚೇತನಕ್ಕೆ ಅಗತ್ಯ ಕ್ರಮಕೈಗೊಳ್ಳಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವುದಾಗಿ ತಹಶೀಲ್ದಾರ್ ಸಂತೋಷ ಕುಮಾರ್ ಭರವಸೆ ನೀಡಿದರು.

ಇಲ್ಲಿನ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಮಂಗಳವಾರ ಸಭೆಯಲ್ಲಿ ಮಾತನಾಡಿದ ಅವರು, ರಾಜೀವ್ ಗಾಂಧಿ ಸಬ್‌ ಮಿಷನ್‌ ಅವ್ಯವಸ್ಥೆಗೆ ಜನರು ಆತಂಕ ಪಡುವ ಅಗತ್ಯವಿಲ್ಲ. ಗೊಂದಲ ಬೇಡ. ಹೊಸಯಂತ್ರ ಬಳಸಿ ಫಲಿತಾಂಶವನ್ನು ಪರೀಕ್ಷಿಸಲಾಗುತ್ತದೆ. ಅಗತ್ಯವಿದ್ದಲ್ಲಿ ಹಣ ಮಂಜೂರಾತಿಗೆ ಪ್ರಸ್ತಾವ ಸಲ್ಲಿಸಲಾಗುತ್ತದೆ ಎಂದರು.

ಲಕ್ಷ್ಮಣ ಉಳ್ಳಾಗಡ್ಡೆ, ಎನ್.ಶ್ರೀನಿವಾಸ್, ಗಂಗಾಧರ ಮಾತನಾಡಿ, ಬಹುಗ್ರಾಮಗಳಿಗೆ ನೀರೊದಗಿಸಬೇಕಿದ್ದ ಸಬ್‌ಮಿಷನ್‌ ಯೋಜನೆಯ ಘಟಕ ಮಾಯಕೊಂಡಕ್ಕೇ ನೀರೊದಗಿಸುತ್ತಿಲ್ಲ. ನಿರ್ವಹಣೆಯೂ ಸರಿಯಿಲ್ಲ ಎಂದು ಆಕ್ಷೇಪಿಸಿದರು.

ರೈತ ಮುಖಂಡ ಎಂ.ಎಸ್.ಕೆ. ಶಾಸ್ತ್ರಿ ಮಾತನಾಡಿ, ಘಟಕದ ವ್ಯವಸ್ಥೆ ಸರಿಯಿಲ್ಲ. ಜನರಿಗೆ ಕುಡಿಯಲು ನೀರು ಸಿಗುತ್ತಿಲ್ಲ. 300 ಎಚ್.ಪಿ ಮೋಟಾರ್ ಅಳವಡಿಸಿ, ಜನರ ನೀರಿನ ಬವಣೆ ನೀಗಿಸಬೇಕು ಎಂದು ಒತ್ತಾಯಿಸಿದರು.

ಕಾಂಪೋಸ್ಟ್‌ ನಿಗಮದ ಸದಸ್ಯ ವೆಂಕಟೇಶ ಮಾತನಾಡಿ, 2014ರಲ್ಲಿ ಕೆರೆಯಲ್ಲಿ ನಿರ್ಮಿಸಿದ ಒಳತೊಟ್ಟಿ ಕಾಮಗಾರಿ ಕಳಪೆಯಾಗಿದ್ದು, ನೀರು ಬಸಿದು ಘಟಕವೇ ವಿಫಲವಾಗಿದೆ ಎಂದು ಆರೋಪಿಸಿದರು.

ಶಿವಮೂರ್ತಿ, ಮಾಲತೇಶ, ಕೆ.ರವಿ, ಪುಟ್ಟರಂಗಸ್ವಾಮಿ, ಗೌಡ್ರ ಅಶೋಕ ಮತ್ತು ಗ್ರಾಮಸ್ಥರು, ರಾಜೀವ್ ಗಾಂಧಿ ಸಬ್‌ಮಿಷನ್‌ ಘಟಕದ ನಿರ್ವಹಣೆ ಏಜೆನ್ಸಿ ಬದಲಾಯಿಸಿ ಎಂದು ಒತ್ತಾಯಿಸಿದರು. ಜತೆಗೆ ಒಳತೊಟ್ಟಿಯಲ್ಲಿ ಜಾಲಿ ಬೆಳೆದಿದ್ದು, ಸರಿಯಾಗಿ ನೀರು ಶುದ್ಧೀಕರಿಸುತ್ತಿಲ್ಲ ಎಂದು ಆರೋಪಿಸಿದರು.

ಕಿರಿಯ ಎಂಜಿನಿಯರ್ ಪುಟ್ಟಸ್ವಾಮಿ ಮಾತನಾಡಿ, ನೀರು ಬಸಿಯುತ್ತಿಲ್ಲ. ಮೋಟಾರ್‌ಗಳಿಂದ ಸೆಕೆಂಡಿಗೆ 86 ಲೀಟರ್‌ ನೀರು ಪೂರೈಕೆಯಾಗುತ್ತಿದೆ. ಈ ಪ್ರಮಾಣವನ್ನು ಹೆಚ್ಚಿಸಲು ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವುದಾಗಿ ತಿಳಿಸಿದರು.

ಹುಚ್ಚವ್ವನಹಳ್ಳಿ ಶೇಖರಪ್ಪ, ರವಿ, ಗಣೇಶ್, ಚಿನ್ನಸಮುದ್ರ ಶೇಖರ ನಾಯ್ಕ, ಅಧಿಕಾರಿಗಳು ಅಗತ್ಯ ವ್ಯವಸ್ಥೆ ಮಾಡಿ ಫಲಾನುಭವಿ ಗ್ರಾಮಗಳಿಗೂ ನೀರು ಹರಿಸಬೇಕು ಎಂದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ಲಕ್ಷ್ಮಣ ಮತ್ತು ಸದಸ್ಯರು, ಪಿಡಿಒ ಸುಮಲತಾ, ಎಇಇ ರವೀಂದ್ರ, ಉಪ ತಹಶೀಲ್ದಾರ್ ರಾಮಸ್ವಾಮಿ, ಮಾಜಿ ಪುರಸಭಾಧ್ಯಕ್ಷ ಎಸ್.ನೀಲಪ್ಪ, ಪಿಎಸ್ ಐ. ಸಣ್ಣ ನಿಂಗಣ್ಣನವರ್, ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT