ಸಂಕ್ರಾಂತಿ ಎಂದಾಕ್ಷಣ ಸುಮಾರು 35 ವರ್ಷಗಳ ಹಿಂದಿನ ದಿನಗಳು ನನ್ನ ನೆನಪಿಗೆ ಬರುತ್ತವೆ. ಹಬ್ಬಕ್ಕೆ ವಾರ ಮೊದಲೇ ತಯಾರಿ ಶುರುವಾಗುತ್ತಿತ್ತು. ಎಳ್ಳು-ಬೆಲ್ಲದ ಮಿಶ್ರಣ ಹಾಗೂ ಸಕ್ಕರೆ ಅಚ್ಚನ್ನು ಮಾಡುವುದು ದೊಡ್ಡ ಸಂಭ್ರಮ. ದೊಡ್ಡವರಿಗೆ ಕಾಣದಂತೆ ಅದನ್ನು ಕದ್ದು ತಿನ್ನುವ ಆಸೆ. ನಂತರ ಅವರಿಂದ ಬೈಗುಳ.
ಮುತ್ತೈದೆಯರಿಂದ ಈ ಋತುವಿನ ಬೆಳೆಗಳಾದ ಅವರೆಕಾಯಿ, ಕಡಲೆಕಾಯಿ, ಎಲಚಿ ಹಣ್ಣು, ಗೆಣಸು, ಸಿಹಿಗುಂಬಳ ಹಾಗೂ ಇತರೆ ಹಣ್ಣುಗಳನ್ನೊಳಗೊಂಡ ಬಾಗಿನ ಸಮರ್ಪಣೆ. ಹಬ್ಬದ ದಿನ ಮನೆಗಳ ಮುಂದೆ ರಂಗುರಂಗಿನ ರಂಗವಲ್ಲಿಯ ಚಿತ್ತಾರ. ದೇವರಿಗೆ ಎಳ್ಳು, ಸಕ್ಕರೆ ಅಚ್ಚು, ಕಬ್ಬು ಹಾಗೂ ರುಚಿಯಾದ ಸಿಹಿ ಪೊಂಗಲಿನ ನೈವೇದ್ಯ.
ಹೊಸ ಉಡುಗೆ ತೊಟ್ಟು ಒಂದು ಬುಟ್ಟಿಯಲ್ಲಿ ಎಳ್ಳುಬೆಲ್ಲದ ಪೊಟ್ಟಣಗಳು, ಸಕ್ಕರೆ ಅಚ್ಚು, ಕಬ್ಬು ಹಾಗೂ ಹಣ್ಣು ಇವೆಲ್ಲವನ್ನೂ ಹಿಡಿದು ಅಕ್ಕಂದಿರ ಜೊತೆ ಪರಿಚಯದ ಮನೆಗಳಿಗೂ ಹೋಗಿ ಎಳ್ಳು ಬೀರಿ ಬರುತ್ತಿದ್ದೆ. ಈ ಸಂತಸ ಇಂದು ಕೇವಲ ಕಾಡುವ ನೆನಪು. -ರಶ್ಮಿ ಪ್ರಶಾಂತ್, ಅಶೋಕನಗರ