ನವದೆಹಲಿ: ವಿವಿಧ ರಾಜ್ಯಗಳಲ್ಲಿ ‘ಪದ್ಮಾವತ್’ ಚಿತ್ರ ಪ್ರದರ್ಶನಕ್ಕೆ ನಿಷೇಧ ಹೇರಿರುವ ಕ್ರಮ ಪ್ರಶ್ನಿಸಿ ಸಿನಿಮಾ ನಿರ್ಮಾಪಕರು ಸಲ್ಲಿಸಿದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಬುಧವಾರ ಸಮ್ಮತಿಸಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವರಿರುವ ಪೀಠವು ಅರ್ಜಿಯ ತ್ವರಿತ ವಿಚಾರಣೆಗೆ ಒಪ್ಪಿದೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ರಾಜಸ್ಥಾನ, ಹರಿಯಾಣ, ಗುಜರಾತ್, ಹಿಮಾಚಲ ಪ್ರದೇಶ, ಮಧ್ಯಪ್ರದೇಶದಲ್ಲಿ ‘ಪದ್ಮಾವತ್’ ಚಿತ್ರಕ್ಕೆ ನಿಷೇಧ ಹೇರಲಾಗಿದೆ. ಇದೇ 25ರಂದು ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
ರಾಜಸ್ಥಾನದಲ್ಲಿ ಪ್ರತಿಭಟನೆ (ಜೈಪುರ ವರದಿ): ‘ಪದ್ಮಾವತ್’ ಚಿತ್ರದ ಬಿಡುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಆಗ್ರಹಿಸಿ ರಜಪೂತ ಸಮುದಾಯದವರು ರಾಜಸ್ಥಾನದ ಚಿತ್ತೋರಗಡದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಸುಮಾರು ಅರ್ಧ ಗಂಟೆ ಉದಯಪುರ– ಅಹಮದಾಬಾದ್ ಹೆದ್ದಾರಿಯನ್ನು ತಡೆದರು.
‘ಒಗ್ಗಟ್ಟು ಪ್ರದರ್ಶಿಸುವ ಸಲುವಾಗಿ ಜೋಧಪುರದ ಸಮರೌನಲ್ಲಿ 21ರಂದು ಬೃಹತ್ ಸಂಖ್ಯೆಯಲ್ಲಿ ರಜಪೂತ ಸಮುದಾಯದವರು ಸೇರಬೇಕು’ ಎಂದು ಶ್ರೀ ರಜಪೂತ ಕರ್ಣಿ ಸೇನಾದ ಮುಖ್ಯಸ್ಥ ಲೋಕೇಂದ್ರ ಸಿಂಗ್ ಕರೆ ನೀಡಿದ್ದಾರೆ.