ಬೆಂಗಳೂರು: ರಾಜ್ಯದ ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿಯಲ್ಲಿರುವ ಹೈಕೋರ್ಟ್ ಪೀಠಗಳನ್ನು ಇ–ಕೋರ್ಟ್ಗಳಾಗಿ ಪರಿವರ್ತಿಸುವ ಪ್ರಸ್ತಾವಕ್ಕೆ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
2020ರ ವೇಳೆಗೆ ಕಾಗದ ರಹಿತ ಇ– ಕೋರ್ಟ್ಗಳಾಗಿ ಪರಿವರ್ತಿಸಲಾಗುವುದು. ₹ 43. 50 ಕೋಟಿ ಮೊತ್ತದ ‘ಸಮಗ್ರ ನ್ಯಾಯಾಲಯ ಪ್ರಕರಣ ನಿರ್ವಹಣಾ ವ್ಯವಸ್ಥೆ’ಗೆ (ಐಸಿಎಂಎಸ್) ರಾಜ್ಯ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ.
‘ಈ ವ್ಯವಸ್ಥೆ ಅಳವಡಿಸುವುದರಿಂದ ಕಕ್ಷಿದಾರರು ಯಾವುದೇ ಪ್ರದೇಶದಿಂದ ವಕೀಲರನ್ನು ನೇಮಿಸಿ ವಿಡಿಯೊ ಸಂವಾದದ ಮೂಲಕ ವಾದ ಮಂಡನೆಗೆ ಅವಕಾಶ ಸಿಗಲಿದೆ’ ಎಂದು ಸಭೆಯ ಬಳಿಕ ಕಾನೂನು ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು.
ಅನಿಮೇಷನ್ ವಿಷ್ಯುವಲ್ ಎಫೆಕ್ಟ್, ಗೇಮಿಂಗ್ ಅಂಡ್ ಕಾಮಿಕ್ಸ್ ವಲಯದಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಕೇಂದ್ರವನ್ನು ಬೆಂಗಳೂರಿನಲ್ಲಿ ₹ 48.85 ಕೋಟಿ ವೆಚ್ಚದಲ್ಲಿ ಸ್ಥಾಪಿಸಲು ಸಬೆ ಒಪ್ಪಿಗೆ ನೀಡಿದೆ ಎಂದೂ ಅವರು ಹೇಳಿದರು.
ರಾಜ್ಯದ ವಿವಿಧ ಜೈಲುಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 105 ಪುರುಷ ಮತ್ತು ನಾಲ್ವರು ಮಹಿಳೆಯರು ಸೇರಿ ಒಟ್ಟು 109 ಕೈದಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿದೆ.
ಇತರ ನಿರ್ಣಯಗಳು:
* ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯ (ಧಾರವಾಡ) ಮತ್ತು ಖಾಜಾ ಬಂದೆನವಾಜ ವಿಶ್ವವಿದ್ಯಾಲಯ (ಕಲಬುರ್ಗಿ) ಮಸೂದೆಗೆ ಅನುಮೋದನೆ
* ಮೈಸೂರು ನಗರ ಪೊಲೀಸ್ ಆಯುಕ್ತರ ಹೊಸ ಕಚೇರಿ ಕಟ್ಟಡ ಹೆಚ್ಚುವರಿ ನಿರ್ಮಾಣ ಕಾಮಗಾರಿಯನ್ನು ₹ 4.10 ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ಅನುಮೋದನೆ