ಶ್ರೀನಗರ: ಜಮ್ಮುಕಾಶ್ಮೀರದ ಸಾಂಬಾ ಜಿಲ್ಲೆಯ ಗಡಿಯಲ್ಲಿ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿ, ನಾಗರಿಕರು ಮತ್ತು ಭಾರತೀಯ ಯೋಧರ ಮೇಲೆ ಶೆಲ್ ದಾಳಿ ನಡೆಸಿದೆ. ಒಬ್ಬ ಬಿಎಸ್ಎಫ್ ಯೋಧ ಹುತಾತ್ಮರಾಗಿದ್ದಾರೆ.
ಪಾಕಿಸ್ತಾನದ ಈ ದಾಳಿಯಲ್ಲಿ ನೀಲಮ್ ದೇವಿ(17) ಎಂಬ ಯುವತಿಯು ಸಾವಿಗೀಡಾಗಿದ್ದಾಳೆ. ಒಬ್ಬ ಯೋಧ ಹಾಗೂ 5 ಮಂದಿ ನಾಗರಿಕರಿಗೆ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ಯೋಧನನ್ನು ಎ. ಸುರೇಶ್ ಎಂದು ಗುರುತಿಸಲಾಗಿದೆ. ತಮಿಳುನಾಡಿನವರಾದ ಇವರು ಬಿಎಸ್ಎಫ್ ಪಡೆಯ 78 ಬೆಟಾಲಿಯನ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಪಾಕಿಸ್ತಾನ ಯೋಧರು ಆರ್.ಎಸ್ ಪುರ, ಅಮಿಯಾ, ರಾಮ್ಘರ್ ವಲಯದಲ್ಲಿ ಶೆಲ್ ಹಾಗೂ ಗುಂಡಿನ ದಾಳಿ ನಡೆಸಿದ್ದಾರೆ. ಗಡಿ ಭಾಗದಲ್ಲಿನ 20 ಗುಡ್ಡಗಾಡು ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಯೋಧರು ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.