ಇಸ್ಲಾಮಾಬಾದ್: ಗಡಿ ನಿಯಂತ್ರಣ ರೇಖೆ ಬಳಿ ಭಾರತೀಯ ಯೋಧರು ಗುರುವಾರ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ ಎಂದು ಆರೋಪಿಸಿರುವ ಪಾಕಿಸ್ತಾನ, ಈ ಸಂಬಂಧ ಭಾರತದ ಡೆಪ್ಯೂಟಿ ಹೈಕಮಿಷನರ್ ಜೆ.ಪಿ ಸಿಂಗ್ ಅವರನ್ನು ಕರೆಸಿ ತನ್ನ ಪ್ರತಿಭಟನೆ ದಾಖಲಿಸಿದೆ.
ವಿದೇಶಾಂಗ ಇಲಾಖೆಯ ಮಹಾ ನಿರ್ದೇಶಕ (ದಕ್ಷಿಣ ಮತ್ತು ಸಾರ್ಕ್) ಮಹಮದ್ ಫೈಸಲ್ ಅವರು ಸಿಂಗ್ ಅವರನ್ನು ಕರೆಸಿಕೊಂಡು, ಭಾರತದ ಯೋಧರು ನಡೆಸಿದ ದಾಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನ ಸಂಯಮದಿಂದ ಇದ್ದರೂ, ಭಾರತ ನಿರಂತರವಾಗಿ ಕದನ ವಿರಾಮ ಉಲ್ಲಂಘಿಸುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.
ಈ ವರ್ಷದ ಜನವರಿಯಲ್ಲಿ ಭಾರತ 110 ಬಾರಿ ಕದನ ವಿರಾಮ ಉಲ್ಲಂಘಿಸಿದೆ. ಭಾರತದ ಯೋಧರು ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿದ್ದು, 10 ಮಂದಿ ಗಾಯಗೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.