ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಸವಣ್ಣನನ್ನು ಧರ್ಮ ಗುರು ಎಂದು ಒಪ್ಪಿಕೊಳ್ಳುತ್ತಿಲ್ಲ'

Last Updated 19 ಜನವರಿ 2018, 9:00 IST
ಅಕ್ಷರ ಗಾತ್ರ

ಕೂಡಲಸಂಗಮ: ಶಿವಯೋಗ ಮಂದಿರದಲ್ಲಿ ತಯಾರಾದ ಕೆಲವು ವಿರಕ್ತ ಮಠಾಧೀಶರನ್ನು, ವೀರಶೈವ ಮಹಾಸಭಾ ಹಾಗೂ ಪಂಚಪೀಠಾಧೀಶರು ಪಕ್ಷಾಂತರ ಸಂಸ್ಕೃತಿಯಲ್ಲಿ ಬೆಳೆಸಿದ ಪರಿಣಾಮ ಅವರು ಬಸವಣ್ಣನನ್ನು ಧರ್ಮ ಗುರು ಎಂದು ಒಪ್ಪಿಕೊಳ್ಳುತ್ತಿಲ್ಲ ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಮಾತೆ ಮಹಾದೇವಿ ಹೇಳಿದ್ದಾರೆ.

‘ಹಾನಗಲ್ ಕುಮಾರ ಸ್ವಾಮೀಜಿ ಅವರ ಬಗ್ಗೆ ವೈಯಕ್ತಿಕವಾಗಿ ಯಾವುದೇ ದ್ವೇಷವಿಲ್ಲ. ಆದರೆ, ವೀರಶೈವ ಮಹಾಸಭಾ ಸ್ಥಾಪಿಸಿದ್ದರಿಂದಲೇ ಲಿಂಗಾಯತ ಧರ್ಮದ ಮಾನ್ಯತೆಗೆ ನೂರು ವರ್ಷಗಳ ಹಿನ್ನಡೆಯಾಯಿತು ಎಂಬ ಕಟುಸತ್ಯ ಹೇಳಿದ್ದೇನೆ. ಕೆಲವರಿಗೆ ಅದನ್ನು ಅರಗಿಸಿಕೊಳ್ಳುವ ಸಾಧ್ಯವಾಗುತ್ತಿಲ್ಲ’ ಟೀಕಿಸಿದ್ದಾರೆ.

‘ನಾಗನೂರು ಮಠದ ಸಿದ್ಧರಾಮ ಸ್ವಾಮೀಜಿ ಅವರು ಶಿವಯೋಗ ಮಂದಿರದಲ್ಲಿ ತರಬೇತಿ ಪಡೆದಿದ್ದಾರೆ. ಹಾಗಾಗಿ ಅವರು, ಅಲ್ಲಿಯ ಬಸವ ತತ್ವಕ್ಕೆ ವಿರುದ್ದವಾದ ಸಂಸ್ಕೃತಿ, ಪರಂಪರೆಯನ್ನು ಖಂಡಿಸದೆ ಒಪ್ಪಿಕೊಳ್ಳುತ್ತಿದ್ದಾರೆ. ಶಿವಯೋಗ ಮಂದಿರದಲ್ಲಿ ತಯಾರಾದ ಬಹುತೇಕ ವಟುಗಳು ಪಂಚಪೀಠದವರ ಜೊತೆ ಸಖ್ಯ ಬೆಳೆಸಿ ವೀರಶೈವವೇ ಸತ್ಯ ಎಂದು ಹೇಳುತ್ತಾ ಲಿಂಗಾಯತ ಧರ್ಮದ ಹೋರಾಟಕ್ಕೆ ಹಿನ್ನಡೆ ಉಂಟು ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಕಳೆದ 40 ವರ್ಷಗಳಿಂದ ಲಿಂಗಾಯತ ಧರ್ಮದ ಪ್ರಸಾರವನ್ನೇ ಉಸಿರಾಗಿಸಿಕೊಂಡಿದ್ದೇನೆ. 22 ವರ್ಷಗಳ ಹಿಂದೆಯೇ ದೆಹಲಿಯಲ್ಲಿ ಲಿಂಗಾಯತ ಧರ್ಮ ಮಾನ್ಯತೆಗಾಗಿ ಹೋರಾಟ ಮಾಡಿದ್ದೇನೆ. ಆದರೂ, ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡುತ್ತಿರುವ ಪಂಚಪೀಠಾಧೀಶ‌ರು ಹಾಗೂ ವೀರಶೈವ ಮಹಾಸಭಾದ ಬಗ್ಗೆ ಚಕಾರವೆತ್ತದೇ, ನಮ್ಮ ಮೇಲೆ ಆರೋಪ ಮಾಡುತ್ತಿರುವುದು ಖಂಡನೀಯ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ವೀರಶೈವ ಮಹಾಸಭೆಯ ಧೋರಣೆಗಳು ಲಿಂಗಾಯತ ಧರ್ಮಕ್ಕೆ ವಿರುದ್ಧವಾಗಿವೆ 115 ವರ್ಷಗಳಿಂದ ವೀರಶೈವ ಮಹಾಸಭಾ, ಪಂಚಪೀಠಾಧೀಶರು ಲಿಂಗಾಯತ ಸಮಾಜದ ಮೇಲೆ ಕಳೆ ಬೆಳೆಸಿದ್ದರು. ಸತ್ಯ ಹೇಳುವ ಮೂಲಕ ಲಿಂಗಾಯತ ಸಮಾಜಕ್ಕೆ ಅಂಟಿದ್ದ ಕಳೆಯನ್ನು ತೆಗೆಯುವ ಕಾರ್ಯ ಮಾಡುತ್ತಿದ್ದೇವೆ ಎಂಬುದನ್ನು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಅವರು ಗಮನಿಸಬೇಕು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT