ಚಿಕ್ಕೋಡಿ: ‘ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತ್ರತ್ವದ ಸರ್ಕಾರ ಎಲ್ಲ ರಂಗಗಳಲ್ಲೂ ವಿಫಲವಾಗಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗಟ್ಟಿದೆ. ಭ್ರಷ್ಟಾಚಾರ, ಅತ್ಯಾಚಾರ, ಕೊಲೆಯಂತಹ ಘಟನೆಗಳು ತಾಂಡವವಾಡುತ್ತಿವೆ. ಇಂತಹ ಸರ್ಕಾರವನ್ನು ಕಿತ್ತು ಹಾಕುವ ಅಗತ್ಯವಿದೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತೂಗೆಯಲು ಸಂಕಲ್ಪ ಮಾಡಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.
ತಾಲ್ಲೂಕಿನ ಅಂಕಲಿ ಮತ್ತು ಯಡೂರ ಗ್ರಾಮಗಳ ವ್ಯಾಪ್ತಿಯಲ್ಲಿ ಕೃಷ್ಣಾ ನದಿ ತೀರದಲ್ಲಿ ನಿರ್ಮಿಸಲಾಗಿರುವ ಘಾಟ್ಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕರ್ನಾಟಕ ರಾಜ್ಯ ನೀರಾವರಿ ನಿಗಮ ವತಿಯಿಂದ ರಾಜ್ಯಸಭೆ ಸದಸ್ಯ ಡಾ.ಪ್ರಭಾಕರ ಕೋರೆ ಅವರ ಪ್ರಯತ್ನದಿಂದ ಮಂಜೂರಾದ ತಲಾ ₹ 50 ಲಕ್ಷ ವೆಚ್ಚದಲ್ಲಿ ಘಾಟ್ಗಳನ್ನು ನಿರ್ಮಿಸಲಾಗಿದೆ’ ಎಂದು ಅವರು ತಿಳಿಸಿದರು.
ದೂಧಗಂಗಾ ಕೃಷ್ಣಾ ಸಹಕಾರ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಭರತ ಬನವಣೆ, ನಿರ್ದೇಶಕ ಪ್ರಕಾಶ ಪಾಟಿಲ, ಮಲ್ಲಿಕಾರ್ಜುನ ಕೋರೆ, ಅಜೀರಾವ ದೇಸಾಯಿ, ತಾತ್ಯಾಸಾಹೆಬ ಕಾಟೆ, ಮಹಾವಿರ ಮಿರ್ಜಿ, ಬಾಳಗೌಡಾ ರೇಂದಾಳೆ, ಸುರೇಶ ಪಾಟೀಲ, ತುಕಾರಾಂ ಪಾಟೀಲ, ವಿವೇಕ ಕಮತೆ, ಪ್ರಭಾಕರ ಶಿಂಧೆ, ಸಂಜಯ ಚೌಧರಿ, ಮಹೇಶ ಭಾತೆ ಇದ್ದರು.