ಬೆಳಗಾವಿ: ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರಂತೆ ಪ್ರಚೋದನೆ ಮಾಡುವುದರಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಸಚಿವ ಆರ್.ವಿ. ದೇಶಪಾಂಡೆ ಶುಕ್ರವಾರ ಇಲ್ಲಿ ಹೇಳಿದರು.
'ಹೆಗಡೆ ಏನು ಹೇಳುತ್ತಾರೆ ಎನ್ನುವುದು ಅವರಿಗೇ ಗೊತ್ತಿಲ್ಲ. ಪ್ರೀತಿ, ವಿಶ್ವಾಸ ಮತ್ತು ನಂಬಿಕೆಯಿಂದ ಅಭಿವೃದ್ಧಿ ಮಾಡಬಹುದು. ಕೇಂದ್ರದಲ್ಲಿ ಸಚಿವರಾದವರಿಗೆ ಜವಾಬ್ದಾರಿ ಇರಬೇಕು. ಮತ್ತು ಆ ಸ್ಥಾನಕ್ಕೆ ತಕ್ಕಂತೆ ಕೆಲಸ ಮಾಡಬೇಕೇ ಹೊರತು ಪ್ರಚೋದಿಸುವ ಕೆಲಸ ಮಾಡಬಾರದು’ ಎಂದು ಸಲಹೆ ನೀಡಿದರು.
‘ನಾನು ನನ್ನ ಕ್ಷೇತ್ರದಲ್ಲಿ ಬಹಳಷ್ಟು ಕೆಲಸ ಮಾಡಿದ್ದೇನೆ. ಅದೂ ಹೆಗಡೆಗೆ ಗೊತ್ತಿಲ್ಲ. ಸಂಸದರಾಗಿ ಅವರೇನು ಮಾಡಿದ್ದಾರೆ ಎನ್ನುವುದು ನನಗೆ ಗೊತ್ತಿದೆ’ ಎಂದರು.
ಹಜ್ ಯಾತ್ರಿಕರಿಗೆ ನೀಡುತ್ತಿದ್ದ ಸಹಾಯಧನ ರದ್ದುಪಡಿಸಿರುವ ಕೇಂದ್ರ ಸರ್ಕಾರದ ಕ್ರಮ ತಪ್ಪು ಎಂದ ಅವರು, ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮುನ್ನ ಮುಸ್ಲಿಂ ಮುಖಂಡರೊಂದಿಗೆ ಸಮಾಲೋಚನೆ ನಡೆಸಬೇಕಿತ್ತು ಎಂದು ಅಭಿಪ್ರಾಯಪಟ್ಟರು.