ದೇವರಹಿಪ್ಪರಗಿ: ಸಮೀಪದ ಮುಳಸಾವಳಗಿ ಗ್ರಾಮದಲ್ಲಿ ಜ. 20ರ ಶನಿವಾರ ಪಂಚಮಸಾಲಿ ಸಮಾಜದ ಆಶ್ರಯದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವ, 194ನೇ ಕಿತ್ತೂರು ವಿಜಯೋತ್ಸವ ಹಾಗೂ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 11ಕ್ಕೆ ಸಿದ್ಧಾರೂಢ ಮಠದಿಂದ ಆರಂಭಗೊಳ್ಳುವ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸುವುದು. ಸಂಜೆ 4ಕ್ಕೆ ಸಮಾರಂಭ ಹಾಗೂ ವಿಜಯೋತ್ಸವ ಜರುಗಲಿದೆ.
ಸಮಾರಂಭದ ಸಾನ್ನಿಧ್ಯವನ್ನು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಶ್ರೀ, ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯರು ವಹಿಸುವರು. ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಪಾಲ್ಗೊಳ್ಳುವರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಬಸವನಬಾಗೇವಾಡಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕಾಗಿ ಪಟ್ಟಣದಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ ಗುರುವಾರ ಸ್ಥಳ ಪರಿಶೀಲನೆ ಮಾಡಿದರು.
ಬಸ್ ನಿಲ್ದಾಣ ಪಕ್ಷದಲ್ಲಿ ಇರುವ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದ ಜಾಗದಲ್ಲಿ ಸುಮಾರು 60X70 ವಿಸ್ತೀರ್ಣ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲು ಜಿಲ್ಲಾ ಆಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಹೇಳಿದರು.
ಇಂದಿರಾ ಕ್ಯಾಂಟಿನ್ಗೆ ಅಗತ್ಯವಿರುವ ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ, ಸಿ.ಸಿ. ಕ್ಯಾಮೆರಾ, ತಡೆಗೋಡೆ ನಿರ್ಮಾಣದ ವ್ಯವಸ್ಥೆಯನ್ನು ಪುರಸಭೆ ವಹಿಸಿಕೊಂಡಿದೆ. ಪಟ್ಟಣದಲ್ಲಿ ಇಂದಿರಾ ಕ್ಯಾಂಟಿನ್ ಆರಂಭವಾದರೆ ₹ 5 ಕ್ಕೆ ಬೆಳಗಿನ ಉಪಹಾರ, ₹ 10ಕ್ಕೆ ಮಧ್ಯಾಹ್ನ ಹಾಗೂ ಸಂಜೆ ಊಟ ಪಡೆದುಕೊಳ್ಳಬಹುದಾಗಿದೆ ಎಂದೂ ಹೇಳಿದರು.
ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಾದೇವ ಮುರಗಿ, ತಹಶೀಲ್ದಾರ್ ಎಂ.ಎನ್. ಚೋರಗಸ್ತಿ, ಪುರಸಭೆ ಮುಖ್ಯಾಧಿಕಾರಿ ಬಿ.ಎ. ಸೌದಾಗರ, ಕಾಂಗ್ರೆಸ್ ಬ್ಲಾಕ್ ಘಟಕದ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಪುರಸಭೆ ಸದಸ್ಯರಾದ ಬಸುರಾಜ ತುಂಬಗಿ, ನಜೀರ ಗಣಿ, ಮುತ್ತು ಉಕ್ಕಲಿ ಇದ್ದರು.