ದೇವನಹಳ್ಳಿ : ತಜ್ಞರ ಅಭಿಪ್ರಾಯದಂತೆ ಅಶುದ್ಧ ಆಹಾರ ಮತ್ತು ಅಶುದ್ಧ ಕುಡಿಯುವ ನೀರಿನಿಂದ ಮಾನವನ ದೇಹದಲ್ಲಿ 146 ವಿವಿಧ ರೋಗಗಳು ಬರುವ ಸಾಧ್ಯತೆ ಇದೆ ಎಂದು ತಾಲ್ಲೂಕು ಹಾಲು ಒಕ್ಕೂಟ ಶಿಬಿರ ಕಚೇರಿ ಉಪವ್ಯವಸ್ಥಾಪಕ ಡಾ.ಎಂ.ಗಂಗಯ್ಯ ತಿಳಿಸಿದರು.
ಬ್ಯಾಡರಹಳ್ಳಿ ಗ್ರಾಮದಲ್ಲಿ ಶುಕ್ರವಾರ ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂಥ ಘಟಕದ ಪರಿಕಲ್ಪನೆ ಐದಾರು ವರ್ಷಗಳಿಂದ ಆರಂಭಗೊಂಡಿದೆ. ಇಡೀ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೊಳವೆ ಬಾವಿ ಎಲ್ಲಿ ಕೊರೆಯಿಸಿದರೂ ಶೇಕಡ ನೂರರಷ್ಟು ಶುದ್ಧ ಕುಡಿಯುವ ನೀರು ಸಿಗತ್ತದೆ ಎಂಬುದರ ಬಗ್ಗೆ ಖಾತರಿ ಇಲ್ಲ ಎಂದರು.
ಫ್ಲೋರೈಡ್ಯುಕ್ತ ನೀರಿನಲ್ಲಿ ಇರುವ ಲವಣಾಂಶಗಳು ಬೆಚ್ಚಿ ಬೀಳಿಸುವ ಪ್ರಮಾಣದಲ್ಲಿ ಇರುತ್ತದೆ. ಪಾಲಕರು ಅಮೃತವನ್ನು ನೀಡುವ ಗೋಮಾತೆಗೂ ಫ್ಲೋರೈಡ್ಯುಕ್ತ ನೀರು ನೀಡಬಾರದು ಎಂದರು. ಅಶುದ್ಧ ನೀರನ್ನು ಪಶುಗಳಿಗೆ ನೀಡಿದರೆ ಹಾಲಿನಲ್ಲಿ ವಿಷಯುಕ್ತ ಅಂಶಗಳು ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ವ್ಯವಸಾಯೋತ್ಪನ್ನ ಮಾರುಕಟ್ಟೆ ಸಮಿತಿ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸಮೂರ್ತಿ ಮತ್ತು ಮುಖಂಡ ಶಿವರಾಮಯ್ಯ ಮಾತನಾಡಿ, ಕಾಮಧೇನು ಎಂದು ಪೂಜೆಸುವ ಪಶುಗಳು ಪಾಲಕರ ಪಾಲಿಗೆ ಅರ್ಥಿಕ ಸಬಲತೆಯನ್ನು ನೀಡುತ್ತಿವೆ ಎಂದರು.
ಪಶುಗಳನ್ನು ಕೆಲ ಪಾಲಕರು ಕೊಳಚೆ ಚರಂಡಿ ಮತ್ತು ಕೆಟ್ಟ ವಾತಾವರಣ ಇರುವ ಜಾಗಗಳಲ್ಲಿ ಮೇಯಲು ಬೀಡುತ್ತಾರೆ. ಅಂತಹ ಪಶುಗಳಿಂದ ಗುಣಮಟ್ಟದ ಹಾಲು ನಿರೀಕ್ಷಿಸುವಂತಿಲ್ಲ ಎಂದು ತಿಳಿಸಿದರು.
ಕಲುಷಿತ ನೀರು ಪಶುವಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಕುಟುಂಬದ ಸದಸ್ಯರಂತೆ ಪಶುಗಳನ್ನು ಪಾಲನೆ ಮಾಡಬೇಕು ಎಂದು ಸಲಹೆ ನೀಡಿದರು.
ಬಮೂಲ್ ನಿರ್ದೆಶಕ ಬಿ.ಶ್ರೀನಿವಾಸ್ ಮಾತನಾಡಿ, ಬಮೂಲ್ ಒಕ್ಕೂಟ ವ್ಯಾಪ್ತಿಯಲ್ಲಿ ಹಾಲು ಉತ್ಪಾದನೆಯಲ್ಲಿ ದೇವನಹಳ್ಳಿ ತಾಲ್ಲೂಕು ಮೊದಲ ಸ್ಥಾನದಲ್ಲಿದೆ ಎಂದು ತಿಳಿದರು. ಮೂರು ವರ್ಷಗಳ ಸತತ ಬರಗಾಲದ ನಡುವೆಯೂ ಹಾಲಿನ ಇಳುವರಿ ಕಡಿಮೆಯಾಗಿಲ್ಲ. ಹಾಲಿನ ಉತ್ಪಾದನೆ ಸ್ಥಳೀಯರಿಗೆ ಜೀವನಾಧಾರವಾಗಿದೆ ಎಂದರು.
ತಾಲ್ಲೂಕಿನಲ್ಲಿ 181 ಹಾಲು ಉತ್ಪಾದನಾ ಸಹಕಾರ ಸಂಘಗಳಿವೆ. ಕಳೆದೆರಡು ವರ್ಷಗಳಲ್ಲಿ ಬಮೂಲ್ ಒಕ್ಕೂಟ ವತಿಯಿಂದ 18 ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಲಾಗಿದೆ ಎಂದು ತಿಳಿಸಿದರು.
ಪ್ರತಿ ಘಟಕಕ್ಕೆ ₹1.3 ರಿಂದ ₹1.5 ಲಕ್ಷ ಒಕ್ಕೂಟ ಪ್ರೋತ್ಸಾಹಧನ ನೀಡಿದೆ. ಹಾಲು ಉತ್ಪಾದಕರಿಗೆ ತಿಂಗಳಿಗೆ ₹11.47 ಕೋಟಿ ಪಾವತಿಸಲಾಗುತ್ತಿದೆ ಎಂದರು. ತಾಲ್ಲೂಕು ಪಂಚಾಯಿತಿ ಸದಸ್ಯೆ ಶೈಲಜಾ ಜಗದೀಶ್ ಮಾತನಾಡಿದರು. ಎಂ.ಪಿ.ಸಿ.ಎಸ್ ಅಧ್ಯಕ್ಷ ಸಿ.ಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಮೂರ್ತಿ,ಎಂ.ಪಿ.ಸಿ.ಎಸ್ ನೌಕರರ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾ ಅಧ್ಯಕ್ಷ ಬಿ.ಎನ್.ಲೋಕೇಶ್, ತಾಲ್ಲೂಕು ಅಧ್ಯಕ್ಷ ಎಚ್.ಚನ್ನಕೇಶವ, ಜೆಡಿಎಸ್ ಕುಂದಾಣ ಹೋಬಳಿ ಘಟಕ ಅಧ್ಯಕ್ಷ ಚಂದ್ರೇಗೌಡ, ಯುವ ಘಟಕ ಉಪಾಧ್ಯಕ್ಷ ರವಿ, ಮುಖಂಡ ಮನೋಜ್ ಗೌಡ, ಮುನಿರಾಜು ಇದ್ದರು.
ಬಮೂಲ್ ನಿರ್ದೆಶಕ ಬಿ.ಶ್ರೀನಿವಾಸ್ ಮಾತನಾಡಿ, ಬಮೂಲ್ ಒಕ್ಕೂಟ ವ್ಯಾಪ್ತಿಯಲ್ಲಿ ಹಾಲು ಉತ್ಪಾದನೆಯಲ್ಲಿ ದೇವನಹಳ್ಳಿ ತಾಲ್ಲೂಕು ಮೊದಲ ಸ್ಥಾನದಲ್ಲಿದೆ ಎಂದು ತಿಳಿದರು. ಮೂರು ವರ್ಷಗಳ ಸತತ ಬರಗಾಲದ ನಡುವೆಯೂ ಹಾಲಿನ ಇಳುವರಿ ಕಡಿಮೆಯಾಗಿಲ್ಲ. ಹಾಲಿನ ಉತ್ಪಾದನೆ ಸ್ಥಳೀಯರಿಗೆ ಜೀವನಾಧಾರವಾಗಿದೆ ಎಂದರು.
ತಾಲ್ಲೂಕಿನಲ್ಲಿ 181 ಹಾಲು ಉತ್ಪಾದನಾ ಸಹಕಾರ ಸಂಘಗಳಿವೆ. ಕಳೆದೆರಡು ವರ್ಷಗಳಲ್ಲಿ ಬಮೂಲ್ ಒಕ್ಕೂಟ ವತಿಯಿಂದ 18 ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಲಾಗಿದೆ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.