ತುಮಕೂರು: ನಗರದ ಜಯನಗರ ಬಡಾವಣೆಯಲ್ಲಿ ರಂಗನಾಥ್ ಎಂಬುವರ ಮನೆಯಲ್ಲಿ ಅವಿತಿದ್ದ ಚಿರತೆ ಹಿಡಿಯಲು ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದೆ.
ಸೆರೆ ಹಿಡಿದಿರುವ ಚಿರತೆ ಅಂದಾಜು 9 ವರ್ಷದ್ದಾಗಿದೆ. ಎರಡು ತಾಸು ನಗರದ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಪರಿಶೀಲನೆಗೆ ಇಡಲಾಗುವುದು. ಬಳಿಕ ಬನ್ನೇರುಘಟಕ್ಕೆ ಕಳಿಸಲಾಗುವುದು ಎಂದು ಜಿಲ್ಲಾ ಅರಣ್ಯಾಧಿಕಾರಿ ರಾಮಲಿಂಗೇಗೌಡ ಹೇಳಿದರು.
ಅಡುಗೆ ಮನೆಯಲ್ಲಿ ಅವಿತು ಕುಳಿತಿದ್ದ ಚಿರತೆಗೆ ಅರವಳಿಕೆ ತಜ್ಞರಾದ ಡಾ.ಸುಜಯ್ ಹಾಗೂ ಡಾ.ಮುರಳೀಧರ್ ಅರವಳಿಕೆ ಪ್ರಯೋಗಿಸಿದರು.
ಮೊದಲ ಪ್ರಯೋಗ ಭಾಗಶಃ ಯಶಸ್ವಿಯಾದರೂ ಚಿರತೆ ಅಬ್ಬರಿಸುತ್ತಿತ್ತು. ಎರಡನೇ ಬಾರಿ ಪ್ರಯೋಗಿಸಿದಾಗ ಚಿರತೆಗೆ ಮಂಪರು(ಮೂರ್ಛೆ) ಆವರಿಸಿ ನೆಲಕ್ಕೊರಗಿತು. ಇಪತ್ತು ನಿಮಿಷಗಳ ಬಳಿಕ ಬಲೆ ಹಾಕಿ ಹಿಡಿದರು. ನಂತರ ಬೋನಿನಲ್ಲಿ ಜಿಲ್ಲಾ ಅರಣ್ಯಾಧಿಕಾರಿ ಕಚೇರಿಗೆ ಸಾಗಿಸಲಾಯಿತು.
ಎರಡು ತಾಸು ಪರಿಶೀಲನೆ ನಡೆಸಿ ಬಳಿಕ ಬನ್ನೇರುಘಟ್ಟಕ್ಕೆ ಕಳುಹಿಸಲಾಗುವುದು ಎಂದು ಅರಣ್ಯ ಅಧಿಕಾರಿಗಳು ಹೇಳಿದರು.