ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೊದಲೇ ಬಿಜೆಪಿ ಸೇರಿದ ಇಬ್ಬರು ಜೆಡಿಎಸ್ ಶಾಸಕರಿಗೆ ಸೋಮವಾರ (ಜ. 22) ತಮ್ಮ ಮುಂದೆ ಖುದ್ದು ಹಾಜರಾಗುವಂತೆ ವಿಧಾನಸಭೆ ಕಾರ್ಯದರ್ಶಿ ಎಸ್. ಮೂರ್ತಿ ನೋಟಿಸ್ ನೀಡಿದ್ದಾರೆ.
ಲಿಂಗಸುಗೂರು ಕ್ಷೇತ್ರದ ಮಾನಪ್ಪ ವಜ್ಜಲ್ ಮತ್ತು ರಾಯಚೂರು ನಗರ ಕ್ಷೇತ್ರದ ಡಾ. ಶಿವರಾಜ ಪಾಟೀಲ ಗುರುವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ವಿಧಾನಸಭಾ ಅಧ್ಯಕ್ಷ ಕೆ.ಬಿ. ಕೋಳಿವಾಡ ಕಚೇರಿಗೆ ತೆರಳಿದ್ದರು. ಆದರೆ, ಅವರು ಇಲ್ಲದಿದ್ದುದರಿಂದ ವಿಧಾನಸಭಾ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ನೀಡಿದ್ದರು.
‘ಕಾನೂನು ಪ್ರಕಾರ ವಿಧಾನಸಭಾ ಅಧ್ಯಕ್ಷರಿಗೇ ರಾಜೀನಾಮೆ ಪತ್ರ ನೀಡಬೇಕು. ಹೀಗಾಗಿ, ಸೋಮವಾರ ಹಾಜರಾಗುವಂತೆ ಈ ಇಬ್ಬರು ಶಾಸಕರಿಗೂ ನೋಟಿಸ್ ನೀಡಲಾಗಿದೆ’ ಎಂದು ಮೂರ್ತಿ ಸ್ಪಷ್ಟಪಡಿಸಿದರು.