ಬಸವನಬಾಗೇವಾಡಿ: ಬಸವ ಜಯಂತಿ ಕಾರ್ಯಕ್ರಮವನ್ನು ರಾಜ್ಯದಲ್ಲಿಯೇ ಮಾದರಿ ಕಾರ್ಯಕ್ರಮವನ್ನಾಗಿ ಆಯೋಜಿಸುವ ಕುರಿತು ಚಿಂತನೆ ನಡೆದಿದೆ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದ ಇಂಗಳೇಶ್ವರ ರಸ್ತೆಯ ಬಸವ ಬಡಾವಣೆಯಲ್ಲಿ ಶುಕ್ರವಾರ ವಾಜಪೇಯಿ ವಸತಿ ಯೋಜನೆಯಡಿ ಜಿ+1 ಗುಂಪು ಮನೆಗಳ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ಹಾಗೂ ಫಲಾನುಭವಿಗಳಿಗೆ ತಿಳಿವಳಿಕೆ ಪತ್ರ ವಿತರಣೆ ಮಾಡಿ ಮಾತನಾಡಿದರು.
ಜಿ+1 ಗುಂಪು ಮನೆಗಳ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಯಾವುದೇ ವರ್ಗಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳ ಲಾಗಿದೆ. ಪುರಸಭೆಯ ಎಲ್ಲ ಸದಸ್ಯರು ಒಗ್ಗಟ್ಟಿನಿಂದ ಅಭಿವೃದ್ಧಿ ಕಾರ್ಯಕ್ಕೆ ಕೈಜೋಡಿಸಿದ್ದು, ಪಟ್ಟಣದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗುತ್ತಿದೆ. ಮುಂದಿನ ದಿನಗಳಲ್ಲಿ ಬಸವನಬಾಗೇವಾಡಿಯು ಮಾದರಿ ತಾಲ್ಲೂಕಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.
ಪಟ್ಟಣದಲ್ಲಿ ಮೆಗಾ ಮಾರುಕಟ್ಟೆ ನಿರ್ಮಾಣವಾದರೆ ಪುರಸಭೆಗೆ ಪ್ರತಿ ತಿಂಗಳು ₹30 ಲಕ್ಷ ಆದಾಯ ಬರಲಿದೆ. ಮುಂದಿನ ದಿನಗಳಲ್ಲಿ ಪಟ್ಟಣದಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಹಾಗೂ ಮೆಡಿಕಲ್ ಕಾಲೇಜು ತರುವುದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಸಿದ್ದಲಿಂಗ ಸ್ವಾಮೀಜಿ, ಕಾಂಗ್ರೆಸ್ ಬ್ಲಾಕ್ ಘಟಕದ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ರುಕ್ಮಿಣಿ ರಾಠೋಡ, ಸಂಗಮೇಶ ಓಲೇಕಾರ, ಪುರಸಭೆ ಉಪಾಧ್ಯಕ್ಷ ಸಂಜೀವ ಕಲ್ಯಾಣಿ ಮಾತನಾಡಿದರು. ಪುರಸಭೆ ಮುಖ್ಯಾಧಿಕಾರಿ ಬಿ.ಎ. ಸೌದಾಗರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪುರಸಭೆ ಅಧ್ಯಕ್ಷೆ ಫರ್ಜಾನ ಚೌಧರಿ, ಲೋಕನಾಥ ಅಗರವಾಲ, ಆಶ್ರಯ ಸಮಿತಿ ಸದಸ್ಯರಾದ ಬಸವರಾಜ ಕೋಟಿ, ಮಲ್ಲೇಶ ಕಡಕೋಳ, ಮಲ್ಲು ನಾಯಕ, ಶಂಕರಗೌಡ ಬಿರಾದಾರ, ನೀಲಪ್ಪ ನಾಯಕ, ಬಸಣ್ಣ ದೇಸಾಯಿ, ಬಸನಗೌಡ ಪಾಟೀಲ, ವೈ.ಡಿ.ನಾಯ್ಕೋಡಿ, ಮುರಗೇಶ ನಾಯ್ಕೋಡಿ, ರವಿ ರಾಠೋಡ, ಬಸವರಾಜ ಹಾರಿವಾಳ ತಹಶೀಲ್ದಾರ ಎಂ.ಎನ್.ಚೋರಗಸ್ತಿ ವೇದಿಕೆಯಲ್ಲಿದ್ದರು. ಬಸವರಾಜ ತುಂಬಗಿ ಸ್ವಾಗತಿಸಿದರು. ಎಚ್.ಬಿ.ಬಾರಿಕಾಯಿ ನಿರೂಪಿಸಿದರು. ವಿಶ್ವನಾಥ ನಿಡಗುಂದಿ ವಂದಿಸಿದರು.
* *
ಮಾತು ಸಾಧನೆ ಆಗಬಾರದು. ಸಾಧನೆಗಳೇ ಜನರ ಮಾತಾಗಿ ಹೊರ ಹೊಮ್ಮಬೇಕು. ಆಗ ಮಾತ್ರ ಜನಪ್ರತಿನಿಧಿಗಳ ಕಾರ್ಯ ಮೆಚ್ಚಿಕೊಳ್ಳುತ್ತಾರೆ
ಶಿವಪ್ರಕಾಶ ಸ್ವಾಮೀಜಿ ಬಸವನಬಾಗೇವಾಡಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.