ಚಿತ್ರದುರ್ಗ: ಯೂನಿಯನ್ ಪಾರ್ಕ್ ಅಭಿವೃದ್ಧಿಗಾಗಿ ಟೆಂಡರ್ ಕರೆದಿರುವಾಗ ಅದೇ ಪಾರ್ಕ್ ಮಧ್ಯಭಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಮುಂದಾಗಿರುವ ನಗರಸಭೆ ಕ್ರಮವನ್ನು ಎಂದು ನಗರಸಭಾ ಸದಸ್ಯೆ ಶ್ಯಾಮಲಾ ಶಿವಪ್ರಕಾಶ್ ಖಂಡಿಸಿದರು.
ಇಂದಿರಾ ಕ್ಯಾಂಟೀನ್ ನಿರ್ಮಿಸಲು ಮಣ್ಣು ರಾಶಿ ಮಾಡಿರುವ ಯೂನಿಯನ್ ಪಾರ್ಕ್ನಲ್ಲೇ ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು, ‘ನಗರಸಭೆ ಸಾಮಾನ್ಯ ಸಭೆಯಲ್ಲಿ ಯೂನಿಯನ್ ಪಾರ್ಕ್ನಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಲು ಒಪ್ಪಿಗೆ ಪಡೆದಿದ್ದಾರೆ ವಿನಾ ಪಾರ್ಕ್ ಮಧ್ಯದಲ್ಲಿ ಅಲ್ಲ’ ಎಂದು ಉಲ್ಲೇಖಿಸಿದರು.
ಕ್ಯಾಂಟೀನ್ ಕಟ್ಟುತ್ತಿರುವ ಜಾಗ ಪಾರ್ಕ್ ಅಲ್ಲ ಎಂದು ಈಗ ಹೇಳುತ್ತಿದ್ದಾರೆ. ಆದರೆ, ಮೂರು ವರ್ಷಗಳ ಹಿಂದೆ ಇದೇ ಪಾರ್ಕ್ ನಲ್ಲಿ ದೀನದಯಾಳ್ ಉಪಾಧ್ಯ ಹೆಸರಿನಲ್ಲಿ ಅಂದಾಜು ₹ 1 ಕೋಟಿ ವೆಚ್ಚದಲ್ಲಿ ನಿರಾಶ್ರಿತರ ರಾತ್ರಿ ತಂಗುದಾಣ ನಿರ್ಮಾಣಕ್ಕೆ ಮುಂದಾದಾಗ ಪಾರ್ಕ್ ಎಂಬ ಕಾರಣ ನೀಡಿ ಒಪ್ಪಿಗೆ ನೀಡಲಿಲ್ಲ. ಈಗಲೂ ಆ ಹಣ ಡಿಸಿ ಅವರ ಖಾತೆಯಲ್ಲಿ ಹಾಗೆ ಇದೆ. ಹಾಗಾದರೆ, ಈಗ ಕ್ಯಾಂಟೀನ್ ನಿರ್ಮಾಣಕ್ಕೆ ಪಾರ್ಕ್ ಎಂಬ ನಿಯಮ ಅನ್ವಯವಾಗುವುದಿಲ್ಲವೇ ಎಂದು ಪ್ರಶ್ನಿಸಿದರು.
‘ಇಷ್ಟಕ್ಕೂ ಇಲ್ಲೇ ಯಾಕೆ ಕ್ಯಾಂಟೀನ್ ಕಟ್ಟಲು ಹಠ ತೊಟ್ಟಿದ್ದಾರೆ? ಮಣ್ಣು ಹೊಡೆಸುತ್ತಿರುವ ಕಾರಣ ಏನು’? ಎಂದು ಹುಡುಕಿದಾಗ ಗೊತ್ತಾಗಿದ್ದು, ಪಾರ್ಕ್ ತಗ್ಗಿನಲ್ಲಿದೆ. ಕ್ಯಾಂಟೀನ್ ಕಟ್ಟಿದರೆ, ಇಂದಿರಾ ಗಾಂಧಿ ಭಾವಚಿತ್ರ ರಸ್ತೆಗೆ ಕಾಣವುದಿಲ್ಲ. ಆದ್ದರಿಂದ ಜಾಗ ಎತ್ತರಿಸಲು ಮಣ್ಣು ಹಾಕಿದ್ದಾರೆ. ಕ್ಯಾಂಟೀನ್ ನಿರ್ಮಾಣದ ಹಿಂದೆ ಬಡವರ ಹಸಿವು ನೀಗಿಸುವ ಉದ್ದೇಶಕ್ಕಿಂತ ಪ್ರಚಾರಕ್ಕೆ ಬಳಸುವ ಯೋಜನೆಯಿದೆ ಎಂದು ಹೇಳಿದರು.
‘ಈ ಪಾರ್ಕ್ ಅಭಿವೃದ್ಧಿಗಾಗಿ ಅಮೃತ್ ಸಿಟಿ ಯೋಜನೆಯಡಿ ಮೊದಲ ಹಂತದಲ್ಲಿ ₹ 73 ಲಕ್ಷ ಮಂಜೂರಾಗಿದೆ. ಟೆಂಡರ್ ಕರೆದಿದ್ದು, ಫೆ.5ರಂದು ತೆರೆಯಲಾಗುತ್ತದೆ. 2ನೇ ಹಂತದಲ್ಲಿ ₹ 80 ಲಕ್ಷ ಮಂಜೂರಾಗುತ್ತದೆ. ಅನೈತಿಕ ಚಟುವಟಿಕೆಗಳ ತಾಣವಾಗಿರುವ ತಗಡಿನ ಮಳಿಗೆಗಳನ್ನು ತೆಗೆಸುತ್ತೇವೆ. ಹಾಗಾಗಿ ಪಾರ್ಕ್ ಮಧ್ಯೆ ಕ್ಯಾಂಟೀನ್ ಕಟ್ಟಲು ಅವಕಾಶ ನೀಡುವುದಿಲ್ಲ. ಹಾಗೆ ನಿರ್ಮಾಣ ಮಾಡಬೇಕೆಂದರೆ, ಪಾರ್ಕ್ನಲ್ಲಿರುವ ಶೌಚಾಲಯ ಜಾಗವನ್ನು ಕ್ಯಾಂಟೀನ್ ನಿರ್ಮಾಣಕ್ಕೆ ಬಳಸಿಕೊಳ್ಳಲಿ’ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ನಗರ ಅಧ್ಯಕ್ಷೆ ವೇದಾವತಿ, ಬಿಜೆಪಿ ಮಹಿಳಾ ಘಟಕದ ಪದಾಧಿಕಾರಿಗಳಾದ ಮಂಜಳಮ್ಮ ಶಾಂತಮ್ಮ, ಜಯಕುಮಾರಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.