ಹೆಂಡತಿ ಊರಿಗೆ ಹೋದರೆ ಪರದಾಡುವ ಗಂಡಂದಿರಿದ್ದಾರೆ. ಸಂಭ್ರಮಿಸುವವರಿಗೂ ಕೊರತೆಯಿಲ್ಲ. ಆದರೆ, ಗಂಡಂದಿರು ಪರ ಊರಿಗೆ ಹೋದರೆ ಹೆಂಗಸರು ಏನು ಮಾಡುತ್ತಾರೆ ಎನ್ನುವ ಕುತೂಹಲ ಸಹಜ. ಈ ಕುತೂಹಲಕ್ಕೆ ಕಥೆಯ ರೂಪ ನೀಡಿ ಸಿನಿಮಾ ಚೌಕಟ್ಟಿಗೆ ತಂದಿದ್ದಾರೆ ನಿರ್ದೇಶಕ ಸಾಯಿಕೃಷ್ಣ.
ರಾಧಿಕಾ
‘ಗಂಡ ಊರಿಗ್ ಹೋದಾಗ’ ಚಿತ್ರದ ಹೆಸರು ಕೇಳಿದ ತಕ್ಷಣ ಪ್ರೇಕ್ಷಕರ ಮನದಲ್ಲಿ ವಿಭಿನ್ನ ಆಲೋಚನೆ ಬರುತ್ತದೆ. ಆದರೆ, ತಪ್ಪಾಗಿ ಕಲ್ಪಿಸಿಕೊಳ್ಳುವುದು ಸರಿಯಲ್ಲ ಎನ್ನುವುದು ಚಿತ್ರತಂಡದ ಹೇಳಿಕೆ. ಐವರು ಗೃಹಿಣಿಯರು ತಮ್ಮ ಪತಿ ಮಹಾಶಯರು ಪರ ಊರಿಗೆ ಹೋದ ವೇಳೆ ಏನು ಮಾಡುತ್ತಾರೆ. ಸಿಕ್ಕಿದ ಸ್ವಾತಂತ್ರ್ಯವನ್ನು ಹೇಗೆ ಅನುಭವಿಸುತ್ತಾರೆ ಎನ್ನುವುದೇ ಈ ಚಿತ್ರದ ಕಥಾವಸ್ತು.
ಶಾಲಿನಿ
ಬಿಡುಗಡೆಗೊಂಡಿರುವ ಚಿತ್ರದ ಹಾಡುಗಳಲ್ಲೂ ಐವರು ನಾಯಕಿಯರು ಮೈಚಳಿ ಬಿಟ್ಟು ಕುಣಿದಿದ್ದಾರೆ. ನಾಯಕಿ ಸಿಂಧೂರ, ‘ಹುಡುಗರು ಮಾತ್ರ ಮದ್ಯ ಕುಡಿದು ಸಾಂಗ್ನಲ್ಲಿ ಕುಣಿಯುತ್ತಾರೆ. ಹುಡುಗಿಯರು ಏಕೆ ಇಂತಹ ಹಾಡಿನಲ್ಲಿ ಕುಣಿಯಬಾರದು. ಹಾಗಾಗಿ, ಅಂತಹ ಹಾಡಿನಲ್ಲಿ ನಾವು ಕುಣಿದಿದ್ದೇವೆ ಅಷ್ಟೇ’ ಎಂದು ಸಮಜಾಯಿಷಿ ನೀಡಿದರು. ‘ನಿಜವಾಗಿ ಬಿಯರ್ ಕುಡಿದು ಕುಣಿದಿದ್ದೀರಾ’ ಎನ್ನುವ ಪ್ರಶ್ನೆಗೆ, ಅಂತಹ ಕೆಲಸಕ್ಕೆ ಕೈಹಾಕಲಿಲ್ಲ ಎಂದು ಉತ್ತರಿಸಿದರು.
ಸಿಂಧೂರಾವ್
ಕಾಮಿಡಿ ಜೊತೆಗೆ ಸಸ್ಪೆನ್ಸ್, ಥ್ರಿಲ್ಲರ್, ಹಾರರ್ ಇರುವ ಚಿತ್ರ ಇದಾಗಿದೆ. ಒಳ್ಳೆಯ ಸಂದೇಶವಿದೆ. ಯುವಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಸಿನಿಮಾ ಮಾಡಿದ್ದೇವೆ ಎಂದ ನಿರ್ದೇಶಕ ಸಾಯಿಕೃಷ್ಣ ಕಥೆಯ ಗುಟ್ಟು ಬಿಟ್ಟುಕೊಡಲಿಲ್ಲ.
ಮತ್ತೊಬ್ಬ ನಾಯಕಿ ರಾಧಿಕಾ ಅವರಿಗೆ ಇದು ಮೂರನೇ ಚಿತ್ರ. ‘ಶೂಟಿಂಗ್ ವೇಳೆ ನಿರ್ದೇಶಕರನ್ನು ಸಾಕಷ್ಟು ಗೋಳಾಡಿಸಿದ್ದೇವೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ. ಎಲ್ಲರೂ ಚಿತ್ರ ನೋಡಿ ಪ್ರೋತ್ಸಾಹಿಸಬೇಕು’ ಎಂದು ಕೋರಿದರು.
ಸ್ವಪ್ನ
ಅನು ಗೌಡ, ಶಾಲಿನಿ ಮತ್ತು ಸ್ವಪ್ನ ಚಿತ್ರದ ಉಳಿದ ನಾಯಕಿಯರು. ಚಿತ್ರಕ್ಕೆ ‘ಎ’ ಪ್ರಮಾಣ ಪತ್ರ ಸಿಕ್ಕಿದೆ. ಜಗದೀಶ್ ಪಿ. ವಡೆಯರಹಳ್ಳಿ, ಜಾನ್, ಕಿರಣ್ ರಾಜು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಅರುಣ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ರಮೇಶ್ ಕೊಯಿರಾ ಅವರದ್ದು. ಶೀಘ್ರವೇ ತೆರೆಗೆ ಬರಲು ಚಿತ್ರತಂಡ ಸಿದ್ಧತೆ ನಡೆಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.