ಬೆಂಗಳೂರು: ದಕ್ಷಿಣ ಕನ್ನಡಿಗರು ಕೇವಲ ಉದ್ಯಮಿಗಳಷ್ಟೇ ಅಲ್ಲ. ಸಾಹಿತ್ಯ, ಯಕ್ಷಗಾನ, ಶಿಕ್ಷಣ, ಬ್ಯಾಂಕಿಂಗ್, ಸಿನಿಮಾ ಮತ್ತಿತರ ರಂಗಗಳಲ್ಲಿ ವಿಶ್ವಖ್ಯಾತಿ ಪಡೆದಿದ್ದಾರೆ ಎಂದು ಲೇಖಕಿ ಅನುಸೂಯಾದೇವಿ ಹೇಳಿದರು.
ಯಲಹಂಕ ಉಪನಗರದಲ್ಲಿ ಆಯೋಜಿಸಿದ್ದ ದಕ್ಷಿಣ ಕನ್ನಡಿಗರ ಸಾಂಸ್ಕೃತಿಕ ಸಂಘದ 21ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಕರಾವಳಿ ಜನರ ಯಕ್ಷಗಾನ, ಭೂತಾರಾಧನೆ, ನಾಗಾರಾಧನೆ ಮತ್ತು ಕೋಲದಂತಹ ಸಾಂಸ್ಕೃತಿಕ ಚಟುವಟಿಕೆಗಳು ವಿಶ್ವದ ಗಮನ ಸೆಳೆದಿವೆ. ದಕ್ಷಿಣ ಕನ್ನಡ ದೇಶದಲ್ಲೇ ಮಾದರಿ ಜಿಲ್ಲೆ ಎನಿಸಿದೆ ಎಂದರು.
ಉದ್ಯಮಿ ಗೋವಿಂದೂರು ವೆಂಕಪ್ಪ ಹೆಗ್ಡೆ, ‘ದಕ್ಷಿಣ ಕನ್ನಡಿಗರಿಗೆ ನೆಲೆ ಮತ್ತು ಅವಕಾಶ ಒದಗಿಸುವ ಮೂಲಕ ಕರಾವಳಿಯ ಸಂಸ್ಕೃತಿ, ಉದ್ಯಮಶೀಲತೆ ಬೆಳೆಯಲು ಕಾರಣರಾದ ರಾಜಧಾನಿಯ ಜನತೆಗೆ ಎಂದಿಗೂ ಚಿರಋಣಿಯಾಗಿದ್ದೇವೆ’ ಎಂದರು.
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಪಠ್ಯೇತರ ಚಟುವಟಿಕೆಗಳಲ್ಲಿ ರಾಷ್ಟ್ರ, ರಾಜ್ಯಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಸಂಘದ ಸದಸ್ಯರು ಮತ್ತು ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಹಾಸ್ಯ ನಾಟಕ ಹಾಗೂ ಕರ್ನಾಟಕ ಕಲಾದರ್ಶಿನಿ ಸಂಘದವರಿಂದ ‘ಲವಕುಶ ಕಾಳಗ–ದ್ರೌಪತಿ ಪ್ರತಾಪ’ ಯಕ್ಷಗಾನ ಪ್ರದರ್ಶನ ನಡೆಯಿತು.