ಬೆಂಗಳೂರು: ಅರಮನೆಯಲ್ಲಿ ಮೂರು ದಿನ ನಡೆದ ‘ಸಾವಯವ ಮತ್ತು ಸಿರಿಧಾನ್ಯ 2018– ಅಂತರರಾಷ್ಟ್ರೀಯ ವ್ಯಾಪಾರ ಮೇಳಕ್ಕೆ ಭಾನುವಾರ ಸಂಪನ್ನಗೊಂಡಿದೆ. ಮೇಳದಲ್ಲಿ ಒಟ್ಟು ₹107 ಕೋಟಿ ವಹಿವಾಟು ನಡೆದಿದೆ.
ಸಾವಯವ ಉತ್ಪನ್ನಗಳಿಗೆ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಒದಗಿಸಿಕೊಡಲು 14 ರೈತ ಒಕ್ಕೂಟಗಳು ಹಾಗೂ ಉದ್ಯಮಿಗಳೊಂದಿಗೆ ₹27.69 ಕೋಟಿ ಮೊತ್ತದ 34 ಇಂಗಿತ ಪತ್ರಗಳಿಗೆ (ಎಲ್ಒಐ) ಸಹಿಹಾಕಿವೆ. ಇದರ ಜೊತೆಗೆ ₹340 ಕೋಟಿ ಮೊತ್ತದ ದೀರ್ಘಕಾಲಿನ (ಮೂರು ವರ್ಷಗಳು) ಒಪ್ಪಂದಗಳು ಆಗಿವೆ.
‘ರೈತರೊಂದಿಗೆ ನೇರವಾಗಿ ವ್ಯವಹರಿಸಲು ಕಂಪನಿಗಳು ಸುಮಾರು ₹5 ಕೋಟಿ ವಹಿವಾಟಿನ ಒಪ್ಪಂದ ಮಾಡಿಕೊಂಡಿವೆ. ಭವಿಷ್ಯದಲ್ಲಿ ಇದು ₹50 ಕೋಟಿಗೂ ವಿಸ್ತರಣೆಯಾಗುವ ನಿರೀಕ್ಷೆ ಇದೆ. ವಾಣಿಜ್ಯ ಮೇಳದಲ್ಲಿ ಮೊದಲ ದಿನವೇ ಸುಮಾರು ₹20 ಕೋಟಿ ವಹಿವಾಟು ನಡೆದಿತ್ತು’ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.