ಬೆಂಗಳೂರು: ವೈದ್ಯರು, ಉಪನ್ಯಾಸಕರು, ಎಂಜಿನಿಯರ್ಗಳು ಸೇರಿದಂತೆ ವಿವಿಧ ವೃತ್ತಿಗಳಲ್ಲಿ ತೊಡಗಿರುವವರು ರಚಿಸಿಕೊಂಡಿರುವ ಕಾಂಗ್ರೆಸ್ ಪಕ್ಷದ ಘಟಕಗಳು ಸಂವಾದ, ಚರ್ಚೆ, ಅಧ್ಯಯನದ ಮೂಲಕ ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ನೆರವು ನೀಡಲು ನಿರ್ಧರಿಸಿವೆ.
ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಈ ಘಟಕಗಳ ಪ್ರಮುಖರ ಸಭೆ ನಡೆಯಿತು. ಎಐಸಿಸಿ ವೃತ್ತಿ ಪರಿಣಿತರ ಘಟಕದ ದಕ್ಷಿಣ ಭಾರತ ಸಂಚಾಲಕಿ ಡಾ. ಗೀತಾ ರೆಡ್ಡಿ, ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಉಪಾಧ್ಯಕ್ಷ ಪ್ರೊ.ಕೆ.ಇ. ರಾಧಾಕೃಷ್ಣ ಸಭೆಯಲ್ಲಿದ್ದರು.
‘ವೃತ್ತಿಪರರಿಗಾಗಿ ವೇದಿಕೆ ಕಲ್ಪಿಸಿದ ಮೊದಲ ಪಕ್ಷ ಕಾಂಗ್ರೆಸ್. ರಾಹುಲ್ ಗಾಂಧಿ ಮತ್ತು ಶಶಿ ತರೂರ್ ಅವರ ಕಲ್ಪನೆಯಂತೆ ಈ ಘಟಕಗಳನ್ನು ರಚಿಸಲಾಗಿದೆ’ ಎಂದು ಗೀತಾ ರೆಡ್ಡಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ವೃತ್ತಿಪರರು ಪಕ್ಷದ ಚಟುವಟಿಕೆಗೆ ಪೂರಕವಾಗಿ ರಾಜಕೀಯ ಚಟುವಟಿಕೆ ನಡೆಸಲು ಅವಕಾಶವಿದೆ. ಸಲಹೆಗಳನ್ನು ನೀಡುವ ಮೂಲಕ ಪ್ರಮುಖ ಜವಾಬ್ದಾರಿ ನಿಭಾಯಿಸಬಹುದಾಗಿದೆ’ ಎಂದರು.
‘ನಗರ ಪ್ರದೇಶದ ಮತದಾನ ಪ್ರಮಾಣ ನಿರೀಕ್ಷಿತ ಪ್ರಮಾಣದಲ್ಲಿ ಇರುವುದಿಲ್ಲ. ನಗರ ಪ್ರದೇಶದ ಮತದಾರರು ನಮ್ಮ ಪರವಾಗಿರುತ್ತಾರೆ ಎಂಬ ವಾತಾವರಣವನ್ನು ಬಿಜೆಪಿಯವರು ಸೃಷ್ಟಿಸಿಕೊಂಡಿದ್ದಾರೆ. ಈ ಘಟಕಗಳ ಮೂಲಕ ನಗರ ಪ್ರದೇಶದ ಮತದಾರರನ್ನು ಜಾಗೃತಗೊಳಿಸಲು ಉದ್ದೇಶಿಸಲಾಗಿದೆ’ ಎಂದರು.