ಬೆಂಗಳೂರು: ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್ (ಟಿಆರ್ಪಿ) ತಿರುಚಿದ ಆರೋದಡಿ ಧಾರಾವಾಹಿ ನಿರ್ಮಾಪಕ ಸೇರಿದಂತೆ ಐವರನ್ನು ಸಿಸಿಬಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ನಗರದ ರಾಜು(ಧಾರಾವಾಹಿ ನಿಮಾರ್ಪಕ), ಸುರೇಶ್, ಜೆಮ್ಸಿ, ಸುಭಾಷ್ ಹಾಗೂ ಮೈಸೂರಿನ ಮಧು ಬಂಧಿತರು.
ಟಿಆರ್ಪಿ ದಾಖಲಿಸುವ ಅಧಿಕೃತ ಹಕ್ಕನ್ನು ಹೊಂದಿರುವ ಬಾರ್ಕ್ ಸಂಸ್ಥೆಯು, ಕೆಲ ದಿನಗಳ ಹಿಂದೆ ಸಿಸಿಬಿ ಪೊಲೀಸರಿಗೆ ದೂರು ನೀಡಿತ್ತು. ಅದರನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಬಾರ್ಕ್ ಸಂಸ್ಥೆಯು ಟಿಆರ್ಪಿ ಉಪಕರಣಗಳನ್ನು ಅಳವಡಿಸಿದ ಸ್ಥಳಗಳ ಬಗ್ಗೆ ತಿಳಿದ ಆರೋಪಿಗಳು, ಅವುಗಳನ್ನು ಬದಲಿಸಿದ್ದರು. ಬದಲಿಸಿದ ಉಪಕರಣಗಳನ್ನು ಬಳಸಿಕೊಂಡು ತಮಗೆ ಇಚ್ಛೆ ಬಂದಂತೆ ಟಿಆರ್ಪಿ ನಿಗದಿ ಮಾಡುತ್ತಿದ್ದರು. ಕಾರ್ಯಕ್ರಮಗಳ ಟಿಆರ್ಪಿ ಹೆಚ್ಚುವಂತೆ ನೋಡಿಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದರು.
ವಿವಿಧ ವಾಹಿನಿಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಹಾಗೂ ಧಾರಾವಾಹಿಗಳ ಟಿಆರ್ಪಿ ನಿಗದಿಗೆ ರಾಜು ಪ್ರತ್ಯೇಕ ತಂಡ ರಚಿಸಿದ್ದರು. ಟಿಆರ್ಪಿ ಹೆಚ್ಚಳ ಮಾಡುವುದಾಗಿ ಕಾರ್ಯಕ್ರಮಗಳ ಹಾಗೂ ಧಾರಾವಾಹಿಗಳ ನಿರ್ಮಾಪಕರಿಂದ ಹಣ ಪಡೆಯುತಿದ್ದರು ಎಂದು ಹೇಳಿದರು.
‘ಉಪಕರಣಗಳನ್ನು ಅಳವಡಿಸುವ ಜವಾಬ್ದಾರಿಯನ್ನು ಬಾರ್ಕ್ ಸಂಸ್ಥೆಯು ಹನ್ಸ್ ಎಂಬ ಕಂಪನಿಗೆ ವಹಿಸಿತ್ತು. ಆರೋಪಿಗಳ ಕೃತ್ಯದಲ್ಲಿ ಹನ್ಸ್ ಕಂಪನಿಯ ಸಿಬ್ಬಂದಿಯೂ ಶಾಮೀಲಾಗಿದ್ದಾರೆ ಎಂಬ ಅನುಮಾನವಿದೆ. ಈ ಸಂಬಂಧ ಆರೋಪಿಗಳನ್ನು ಹೆಚ್ಚಿನ ತನಿಖೆಗೆ ಒಳಪಡಿಸಿದ್ದೇವೆ’ ಎಂದರು.