ಬೆಂಗಳೂರು: 2018–19 ನೇ ಸಾಲಿನ ರಾಜ್ಯ ಬಜೆಟ್ (ಫೆ.16) ಮಂಡನೆಯವರೆಗೂ ಮುಖ್ಯಮಂತ್ರಿಯವರ ಅಧಿಕೃತ ನಿವಾಸ ಕಾವೇರಿಗೆ ಸಾರ್ವಜನಿಕರ ಭೇಟಿ ನಿಷೇಧಿಸಲಾಗಿದೆ.
ಈ ಕುರಿತು ನಿವಾಸದ ಮುಂಭಾಗದಲ್ಲಿ ಫಲಕ ಹಾಕಲಾಗಿದೆ. ಭಾನುವಾರ (ಜ. 21) ಬೆಳಿಗ್ಗೆ ಮುಖ್ಯಮಂತ್ರಿಗೆ ಅಹವಾಲು ಸಲ್ಲಿಸಲು ಅವರ ಮನೆಗೆ ಬಂದಿದ್ದ ಜನರು, ನಿರಾಶರಾಗಿ ಮರಳಿದರು.
‘ಬಜೆಟ್ ಮಂಡನೆ ಪೂರ್ವಭಾವಿಯಾಗಿ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಸಭೆ ನಿಗದಿಯಾಗಿದೆ. ಸಮಯದ ಕೊರತೆಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಮುಖ್ಯಮಂತ್ರಿ ಸಚಿವಾಲಯದ ಮೂಲಗಳು ತಿಳಿಸಿವೆ.