ನವದೆಹಲಿ: ‘ಪದ್ಮಾವತ್’ ಚಿತ್ರ ಬಿಡುಗಡೆಗೆ ಹೇರಿದ್ದ ನಿರ್ಬಂಧಕ್ಕೆ ಸುಪ್ರೀಂ ಕೋರ್ಟ್ ನೀಡಿರುವ ತಡೆಯಾಜ್ಞೆ ಆದೇಶ ಪುನರ್ ಪರಿಶೀಲನೆ ನಡೆಸುವಂತೆ ರಾಜಸ್ಥಾನ ಮತ್ತು ಮಧ್ಯ ಪ್ರದೇಶ ರಾಜ್ಯಗಳು ಸೋಮವಾರ ಅರ್ಜಿ ಸಲ್ಲಿಸಿವೆ.
ಜ.25ರಂದು ದೇಶದಾದ್ಯಂತ ಪದ್ಮಾವತ್ ಚಿತ್ರ ಬಿಡುಗಡೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ಈ ಸಂಬಂಧ ರಾಜಸ್ಥಾನ ಮತ್ತು ಮಧ್ಯ ಪ್ರದೇಶ ಸರ್ಕಾರ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದು, ಮಂಗಳವಾರ ಅರ್ಜಿ ವಿಚಾರಣೆ ನಡೆಸಲು ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ಸಮ್ಮತಿಸಿದೆ.
‘ಪದ್ಮಾವತ್’ ಚಿತ್ರ ಬಿಡುಗಡೆಗೆ ವಿರೋಧಿಸುತ್ತಿರುವ ರಜಪೂತ ಸಮುದಾಯದ ಮಹಿಳೆಯರ ತಂಡವೊಂದು ದಯಾಮರಣಕ್ಕೆ ಅವಕಾಶ ನೀಡುವಂತೆ ಕೋರಿ ರಾಷ್ಟ್ರಪತಿಗೆ ಪತ್ರ ಬರೆಯಲು ನಿರ್ಧರಿಸಿ ಭಾನುವಾರ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದ್ದರು.
ಅಧಿಕೃತವಾಗಿ ಜ.25ಕ್ಕೆ ಚಿತ್ರ ಬಿಡುಗಡೆಯಾಗಲಿದ್ದು ಚಿತ್ರ ನಿರ್ಮಾಣ ಸಂಸ್ಥೆ ‘ವಯೊಕಾಮ್ 18’ ಹಲವು ರಾಜ್ಯಗಳಲ್ಲಿ ಜ.24ರ ಸಂಜೆಯಿಂದಲೇ ವಿಶೇಷ ಪ್ರದರ್ಶನ ನಿಗದಿ ಪಡಿಸಿದೆ. ಸಂಜೆ 6ರಿಂದ 10ರ ವರೆಗೂ ಪ್ರದರ್ಶನಗಳಿಗೆ ಈಗಾಗಲೇ ಬುಕ್ಕಿಂಗ್ ಪ್ರಾರಂಭಿಸಲಾಗಿದೆ.