ಬೆಂಗಳೂರು: ರಾಜಾಜಿನಗರದ ರಾಜ್ಕುಮಾರ್ ರಸ್ತೆಯಲ್ಲಿ ಮುಜಾಮುರ್ ಲಷ್ಕರ್ (20) ಎಂಬುವರ ಮೇಲೆ ಮೂವರು ದುಷ್ಕರ್ಮಿಗಳು ಭಾನುವಾರ ರಾತ್ರಿ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ.
ಅಭಿಮಾನಿ ವಸತಿಗೃಹದಲ್ಲಿ ಸ್ವಚ್ಛತಾ ಕೆಲಸಗಾರರಾಗಿದ್ದ ಅವರು, ಪಕ್ಕದ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದಾರೆ.
ಕಾರ್ಯನಿಮಿತ್ತ ಹೊರಗೆ ಹೋಗಿದ್ದ ಅವರು ರಾತ್ರಿ 11.15ರ ಸುಮಾರಿಗೆ ಕೊಠಡಿಗೆ ಹಿಂದಿರುಗುತ್ತಿದ್ದರು. ಈ ವೇಳೆ ಬೈಕ್ನಲ್ಲಿ ಬಂದ ಮೂವರು, ಅವರನ್ನು ಅಡ್ಡಗಟ್ಟಿ ಮೊಬೈಲ್ ಹಾಗೂ ಹಣ ನೀಡುವಂತೆ ಒತ್ತಾಯಿಸಿದ್ದರು ಎಂದು ರಾಜಾಜಿನಗರ ಪೊಲೀಸರು ತಿಳಿಸಿದರು.
ಅದಕ್ಕೆ ಮುಜಾಮುರ್ ನಿರಾಕರಿಸಿ ಜಗಳವಾಡಿದ್ದರು. ಇದರಿಂದ ಕೋಪಗೊಂಡ ದುಷ್ಕರ್ಮಿಗಳು ಮಚ್ಚಿನಿಂದ ಎಡಗೈಗೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.