ಮಾಲೂರು: ಗ್ರಾಮೀಣ ಪ್ರದೇಶಗಳ ಜನರ ಆರ್ಥಿಕ ಅಭಿವೃದ್ಧಿಗೆ ಹೈನುಗಾರಿಕೆ ತುಂಬಾ ಸಹಕಾರಿಯಾಗಿದೆ ಎಂದು ಕೋಚಿಮುಲ್ ನಿರ್ದೇಶಕ ಕೆ.ವೈ.ನಂಜೇಗೌಡ ತಿಳಿಸಿದರು.
ಪಟ್ಟಣದ ಶಿಬಿರ ಕಚೇರಿಯಲ್ಲಿ ಸೋಮವಾರ ಕೋಚಿಮುಲ್ ವತಿಯಿಂದ ಹಮ್ಮಿಕೊಂಡಿದ್ದ ರೈತರಿಗೆ ಹಾಗೂ ಮಹಿಳಾ ಸಂಘಗಳಿಗೆ ಸ್ವಯಂ ಚಾಲಿತ ಹಾಲು ಕರೆಯುವ ಯಂತ್ರ ವಿತರಿಸಿ ಮಾತನಾಡಿದರು.
ತಾಲ್ಲೂಕಿನಲ್ಲಿ 161 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, ಎನ್ಡಿಪಿ ಯೋಜನೆ ಅಡಿ ಶುದ್ಧ ಹಾಲು ಉತ್ಪಾದನೆಗೆ ಆದ್ಯತೆ ನೀಡಿ ಪ್ರೋತ್ಸಾಹಿಸಲು ₹ 15.8 ಸಾವಿರ ಬೆಲೆ ಬಾಳುವ ಸ್ವಯಂ ಚಾಲಿತ ಹಾಲು ಕರೆಯುವ ಯಂತ್ರ ನೀಡಲಾಗುತ್ತಿದೆ.
ಇದರಲ್ಲಿ ಒಕ್ಕೂಟ ಶೇ 50ರಷ್ಟು ಹಣ ಭರಿಸಲಿದ್ದು, ಉಳಿದ ₹ 7950 ಮಾತ್ರ ಹಾಲು ಉತ್ಪಾದಕರು ನೀಡಬೇಕಾಗಿದೆ. ಸ್ವಯಂ ಚಾಲಿತ ಯಂತ್ರಗಳಿಂದ ಗುಣಮಟ್ಟದ ಹಾಗೂ ಶುದ್ಧವಾದ ಹಾಲು ನೀಡಲು ಹಾಲು ಉತ್ಪಾದಕರು ಪ್ರಯತ್ನಿಸಬೇಕು ಎಂದು ಹೇಳಿದರು.
ಒಕ್ಕೂಟ ಮತ್ತು ಸರ್ಕಾರದಿಂದ ಹಾಲು ಉತ್ಪಾದಕರಿಗೆ ಹಲವಾರು ಯೋಜನೆ ಅನುಷ್ಠಾನಗೊಳಿಸಲಾಗಿದೆ. 100 ಮಂದಿ ಹಾಲು ಉತ್ಪಾದಕರಿಗೆ ಸ್ವಯಂ ಚಾಲಿತ ಹಾಲು ಕರೆಯುವ ಯಂತ್ರಗಳನ್ನು ಶೇ 50 ರಿಯಾಯತಿ ದರದಲ್ಲಿ ನೀಡಲಾಗಿದೆ ಎಂದರು.
ರಾಜ್ಯದಲ್ಲಿ ಒಕ್ಕೂಟ ಹಾಲು ಉತ್ಪಾದನೆಯಲ್ಲಿ ಹಾಗೂ ಗುಣಮಟ್ಟದಲ್ಲಿ ಎರಡನೇ ಸ್ಥಾನದಲ್ಲಿದ್ದು, ಹಾಲಿನ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ ಎಂದು ತಿಳಿಸಿದರು. ಶಿಬಿರದ ಉಪ ವ್ಯವಸ್ಥಾಪಕ ಡಾ.ವಿಶ್ವನಾಥ್, ಮೇಲ್ವಿಚಾರಕರಾದ ನರಸಿಂಹಮೂರ್ತಿ, ನಾರಾಯಣಮೂರ್ತಿ, ಮುಖಂಡ ಎಚ್.ಹನುಮಂತಪ್ಪ ಇದ್ದರು.