ಉಡುಪಿ: ‘ಬಂಟ್ವಾಳದ ಕಲ್ಲಡ್ಕದಲ್ಲಿ ನೀಡಿದ ಹೇಳಿಕೆಗೆ ಈಗಲೂ ಬದ್ಧ’ ಎಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತ ವಿ. ಸುನಿಲ್ ಕುಮಾರ್ ಹೇಳಿದರು.
ಕಲ್ಲಡ್ಕದಲ್ಲಿ ಸೋಮವಾರ ಮಾತನಾಡಿದ್ದ ಸುನಿಲ್ ಕುಮಾರ್ ಮುಂದಿನ ‘ಚುನಾವಣೆ ರಮಾನಾಥ್ ರೈ ಹಾಗೂ ರಾಜೇಶ್ ನಾಯ್ಕ್ ಮಧ್ಯೆ ಅಲ್ಲ, ಬದಲಿಗೆ ರಾಮ ಬೇಕೋ ಇಲ್ಲ ಅಲ್ಲಾಹ್ ಬೇಕೋ ಎಂದು ನಿರ್ಧರಿಸಬೇಕು’ ಎಂದಿದ್ದರು. ಈ ಹೇಳಿಕೆಗೆ ಸಂಬಂಧಿಸಿದಂತೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಮಂಗಳವಾರ ಪ್ರತಿಕ್ರಿಯಿಸಿದರು.
‘ಆರು ಬಾರಿ ಅಲ್ಲಾಹುವಿನ ಕೃಪೆಯಿಂದ ಗೆದ್ದಿದ್ದೇನೆ ಎಂದು ರಮಾನಾಥ ರೈ ಅವರು ಸ್ಪಷ್ಟವಾಗಿ ಹೇಳಿದ್ದರು. ಆದ್ದರಿಂದ ಆ ಕ್ಷೇತ್ರದ ಹಿಂದೂಗಳಿಗೆ ಅಪಮಾನವಾಗಿದೆ. ಅವರು ಮಾಡಿರುವ ಅಪಮಾನಕ್ಕೆ ಉತ್ತರ ಕೊಡಬೇಕಿದೆ. ಇನ್ನೂ ಹತ್ತು ಸಭೆಗಳಲ್ಲಿ ನಾನು ನನ್ನ ಹೇಳಿಕೆಯನ್ನು ನೀಡುತ್ತೇನೆ. ಅಧಿಕೃತವಾಗಿಯೇ ನಾನು ಮಾತನಾಡಿದ್ದೇನೆ’ ಎಂದರು.
‘ಎಲ್ಲರೂ ಬೇಕು ಎಂದು ರೈ ಹೇಳಿದ್ದರೆ ನಮ್ಮ ತಕರಾರು ಇರುತ್ತಿರಲಿಲ್ಲ. ಆದರೆ ಅವರು ಒಂದು ಸಮುದಾಯದಿಂದ ಗೆದ್ದಿದ್ದೇನೆ ಎಂದಿರುವುದು ಸರಿಯಲ್ಲ’ ಎಂದರು.