ನವದೆಹಲಿ: ಡಾರ್ವಿನ್ ಸಿದ್ಧಾಂತ ಬಗ್ಗೆ ಆ ರೀತಿ ಹೇಳಿಕೆ ನೀಡಬೇಡಿ ಎಂದು ಕೇಂದ್ರ ಸಚಿವ ಸತ್ಯಪಾಲ್ ಸಿಂಗ್ ಅವರಿಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಕಳೆದ ವಾರ ಔರಂಗಬಾದ್ನಲ್ಲಿ ಕಾರ್ಯಕ್ರಮವೊಂದನ್ನು ಉದ್ದೇಶಿಸಿದ ಮಾತನಾಡಿದ್ದ ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಹಾಯಕ ಸಚಿವ ಸಿಂಗ್, ಚಾರ್ಲ್ಸ್ ಡಾರ್ವಿನ್ ಅವರ 'ಮಾನವ ವಿಕಾಸ' ಸಿದ್ಧಾಂತ ವೈಜ್ಞಾನಿಕವಾಗಿ ಸರಿ ಇಲ್ಲ. ಆದ್ದರಿಂದ ಶಾಲೆ ಹಾಗೂ ಕಾಲೇಜುಗಳ ಪಠ್ಯಕ್ರಮದಲ್ಲಿ ಅದನ್ನು ಬದಲಾಯಿಸುವ ಅಗತ್ಯವಿದೆ. ಮಾನವ ಭೂಮಿ ಮೇಲೆ ಕಾಣಿಸಿಕೊಂಡಂದಿನಿಂದ ಮಾನವನಾಗಿಯೇ ಇದ್ದಾನೆ ಎನ್ನುವ ಮೂಲಕ ಡಾರ್ವಿನ್ ಸಿದ್ಧಾಂತ ತಪ್ಪು ಎಂದು ವಾದಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಜಾವಡೇಕರ್, ಈ ವಿಷಯದ ಬಗ್ಗೆ ನಾನು ಸಚಿವರೊಂದಿಗೆ ಚರ್ಚಿಸಿದ್ದು ಇಂಥಾ ಹೇಳಿಕೆಗಳನ್ನು ನೀಡಬೇಡಿ. ನಾವು ವಿಜ್ಞಾನವನ್ನು ನಿಸ್ಸಾರವಾಗಿ ಮಾಡಬಾರದು ಎಂದು ಅವರಿಗೆ ಉಪದೇಶ ನೀಡಿದ್ದೇನೆ ಎಂದಿದ್ದಾರೆ.
ಡಾರ್ವಿನ್ ಸಿದ್ಧಾಂತ ತಪ್ಪು ಎಂದು ಸಾಬೀತು ಪಡಿಸಲು ನಾವು ರಾಷ್ಟ್ರೀಯ ಸೆಮಿನಾರ್ ಆಯೋಜಿಸುವ ಉದ್ದೇಶವನ್ನೂ ಇಟ್ಟುಕೊಂಡಿಲ್ಲ. ವಿಜ್ಞಾನಿಗಳನ್ನು ಅವರ ಕಾರ್ಯ ಮಾಡಲು ಬಿಟ್ಟು ದೇಶ ಅಭಿವೃದ್ಧಿಯಾಗುವಂತೆ ಮಾಡೋಣ ಎಂದಿದ್ದಾರೆ ಜಾವಡೇಕರ್.