ಶಕ್ತಿನಗರ: ದೇವಸೂಗೂರಿನ ಸೂಗೂರೇಶ್ವರ ಶಿಕ್ಷಣ ಸಂಸ್ಥೆಯ ಶಾಲೆ ಹಾಗೂ ಕಾಲೇಜಿನ ಸಿಬ್ಬಂದಿಯ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಕೈಗೊಂಡಿರುವ ಅನಿರ್ದಿಷ್ಟ ಉಪವಾಸ ಧರಣಿಯಲ್ಲಿ ನಾಲ್ವರು ಅಸ್ವಸ್ಥರಾಗಿದ್ದಾರೆ.
ನಟರಾಜ ಮ್ಯಾಗೇರಿ, ಶ್ರೀಕಾಂತ, ರಾಜೇಶ್ವರಿ ಪುರಾಣಿಕ ಹಾಗೂ ಸುನಾಂದ ಅಸ್ವಸ್ಥರಾಗಿದ್ದು ತಕ್ಷಣವೇ ಅವರನ್ನು ಆರ್ಟಿಪಿಎಸ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವಿಷಯ ತಿಳಿದ ಸಹಾಯಕ ಆಯುಕ್ತ ವೀರಮಲ್ಲಪ್ಪ ಪೂಜಾರಿ ಸ್ಥಳಕ್ಕೆ ಬಂದು ಪ್ರತಿಭಟನಾಕಾರರ ಬೇಡಿಕೆಗಳನ್ನು ಆಲಿಸಿ, ನಂತರ ಮಾತನಾಡಿದ ಅವರು, ವೇತನವನ್ನು ನೀಡಲಾಗುವುದು. ಸರ್ಕಾರ ಮಟ್ಟದಲ್ಲಿ ಚರ್ಚಿಸಬೇಕಾದ ಬೇಡಿಕೆಗಳನ್ನು ಜಿಲ್ಲಾಡಳಿತ ಮೂಲಕ ಪ್ರಸ್ತಾವ ಸಲ್ಲಿಸಿ ಈಡೇರಿಸುವ ಬಗ್ಗೆ ಭರವಸೆ ನೀಡಿದರು.
ಕನಿಷ್ಠ ವೇತನ ಪಾವತಿಸಬೇಕು ಹಾಗೂ ನೇಮಕಾತಿ ಆದೇಶ ಹೊರಡಿಸಬೇಕು ಎಂಬ ಬೇಡಿಕೆ ಗಳನ್ನು ಈಡೇರಿಸಬೇಕು ಎಂದು ಪ್ರತಿಭಟನಾ ಕಾರರು ಪಟ್ಟು ಹಿಡಿದ ಪರಿಣಾಮ ಅಧಿಕಾರಿಗಳು ಹಿಂತಿರುಗಿದರು. 2 ದಿನಗಳಿಂದ ಶಿಕ್ಷಕರು, ಉಪನ್ಯಾಸ ಕರು, ಧರಣಿ ಕುಳಿತಿರು ವುದರಿಂದ ಶಾಲಾ ಕಾಲೇಜುಗಳಿಗೆ ಬಂದ ವಿದ್ಯಾರ್ಥಿಗಳು ಮನೆಗೆ ತೆರಳಿದರು.
ಇನ್ನೆರಡು ತಿಂಗಳಲ್ಲಿ ವಾರ್ಷಿಕ ಪರೀಕ್ಷೆಗಳು ಆರಂಭವಾಗಲಿದೆ.ಶಿಕ್ಷಕರು ಧರಣಿ ನಡೆಸುತ್ತಿರುವುದರಿಂದ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಗೊಂಡು ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯ ನಿವಾಸಿ ರಾಮನಗೌಡ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸೂಗೂರೇಶ್ವರ ದೇವಸ್ಥಾನದ ಮುಖ್ಯ ಅಧಿಕಾರಿ ಶಿವಕುಮಾರ ಜಾಲಿಬೆಂಚಿ, ವ್ಯವಸ್ಥಾಪಕ ನವೀನ, ಗ್ರಾಮಲೆಕ್ಕಾಧಿಕಾರಿಗಳಾದ ರಾಘವೇಂದ್ರ ಕುಲಕರ್ಣಿ, ವೆಂಕಟೇಶ ಪೋತಗಲ್, ಶಕ್ತಿನಗರ ಠಾಣೆಯ ಪಿಎಸ್ಐ ಸೋಮಶೇಖರ ಕೆಂಚರೆಡ್ಡಿ ಉಪಸ್ಥಿತರಿದ್ದರು.