ಬಾಗಲಕೋಟೆ: ‘ಜಿಲ್ಲೆಯಲ್ಲಿ ಸ್ಥಾಪಿಸಲಾಗಿ ರುವ ಪ್ರತಿಯೊಂದು ತೊಗರಿ ಖರೀದಿ ಕೇಂದ್ರಗಳಲ್ಲಿ ರೈತರಿಗೆ ಉಪಯುಕ್ತವಾದ ಮಾಹಿತಿಯನ್ನೊಳಗೊಂಡ ಫಲಕಗಳನ್ನು ರೈತರಿಗೆ ಕಾಣುವಂತೆ ಹಾಕಬೇಕು’ ಎಂದು ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈ ಕುರಿತು ಜರುಗಿದ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ರೈತರು ಖರೀದಿ ಕೇಂದ್ರಕ್ಕೆ ಬಂದಾಗ ತೊಗರಿ ಖರೀದಿ ಮಾಡುವ ಪ್ರತಿಯೊಂದು ಹಂತದ ಮಾಹಿತಿ ತಿಳಿಯಬೇಕು. ಕಂಪನಿಯವರು ರೈತರು ತಂದ ತೊಗರಿಯನ್ನು ಗುಣಮಟ್ಟಕ್ಕೆ ಸಂಬಂಧಿಸಿದಂತೆ ಪರೀಕ್ಷಿಸಲು ಸಾಣಿಗೆ ಬದಲಾವಣೆ ಮಾಡಬೇಕು. ಅಲ್ಲದೇ ಹುಳುಗಳು ತುಂಬಿರುವ ತೊಗರಿಯನ್ನು ಖರೀದಿಸಲಾಗುವದಿಲ್ಲ ಎಂಬ ಬಗ್ಗೆ ಮಾಹಿತಿಯ ಫಲಕಗಳನ್ನು ಸಹ ಖರೀದಿ ಕೇಂದ್ರಗಳಲ್ಲಿ ಪ್ರದರ್ಶಿಸುವಂತೆ’ ಸೂಚಿಸಲಾಯಿತು.
‘ಹಮಾಲರು ಖರೀದಿ ಕೇಂದ್ರದಲ್ಲಿ ಅನಧಿಕೃತವಾಗಿ ರೈತರಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ರೈತರ ಮುಖಂಡರು ಸಭೆಗೆ ತಿಳಿಸಿದರು. ಈ ಬಗ್ಗೆ ಕಂಡು ಬಂದಲ್ಲಿ ಅವರ ಬಗ್ಗೆ ದೂರು ನೀಡಿದರೆ ಅವರನ್ನು ಬಂಧಿಸಲಾಗುವುದು ಎಂದು ಶಾಂತಾರಾಮ್ ತಿಳಿಸಿದರು.
‘ರೈತರಿಗೆ ಹೆಚ್ಚಿನ ದರಕ್ಕೆ ಮಾರಿಸುವುದಾಗಿ ಹೇಳಿ ರೈತರ ಬಳಿ ಹಣ ವಸೂಲಿ ಮಾಡುತ್ತಿರುವವರ ಬಗ್ಗೆ ನಿಗಾ ಇಡಬೇಕು. ಅಂತವರು ಕಂಡುಬಂದಲ್ಲಿ ಕೂಡಲೇ ಅವರ ಮೇಲೆ ದೂರು ದಾಖಲಿಸಿಬೇಕು. ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.
ರೈತರ ಪಹಣಿಯಲ್ಲಿರುವ ಬೆಳೆಯ ಮಾಹಿತಿಯನ್ನೇ ಕೃಷಿ ಅಧಿಕಾರಿಗಳು ನೀಡುತ್ತಿದ್ದು, ಕ್ಷೇತ್ರಕ್ಕೆ ಭೇಟಿ ನೀಡಿ ಬೆಳೆಯ ಮಾಹಿತಿ ನೀಡುತ್ತಿಲ್ಲ ಎಂದು ರೈತರು ಮುಖಂಡರು ಸಭೆಯಲ್ಲಿ ಪ್ರಸ್ತಾಪಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಈ ಬಗ್ಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಜಂಟಿ ಸಭೆ ಕರೆದು ಕ್ರಮ ಕೈಗೊಳ್ಳಲಾಗುವುದು’ ಎಂದರು.
ಸಭೆಯಲ್ಲಿ ಎಪಿಎಂಸಿ ಸಹಾಯಕ ನಿರ್ದೇಶಕ ಶಂಕರ ಪತ್ತಾರ, ಮುಖಂಡರಾದ ಎಸ್.ವಿ.ಜೀರಗಾಳ, ರವಿ ಹುಣಶ್ಯಾಳ, ಶರಣು ಹುರಕಡ್ಲಿ, ಸಲೀಂ ಮೊಮೀನ್, ರಾಮಣ್ಣ ಸುನಗಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.