ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕುಸ್ತಿಪಟುಗಳ ವಿಶೇಷ ಆಕರ್ಷಣೆ

Last Updated 24 ಜನವರಿ 2018, 10:25 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ: ಇಲ್ಲಿನ ವೆಂಕಟೇಶ್ವರ ಸ್ವಾಮಿಯ 61ನೇ ವರ್ಷ ರಥೋತ್ಸವದ ಅಂಗವಾಗಿ ನಾಣಿಕೇರಿ ದೈವಸ್ಥರಿಂದ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಬೆಳಗಾವಿ, ಕೊಲ್ಲಾಪುರ, ಸಾಂಗ್ಲಿ, ಹರಪನಹಳ್ಳಿ, ದಾವಣಗೆರೆ, ಹೊಸಪೇಟೆ, ಮರಿಯಮ್ಮನಹಳ್ಳಿ, ಗದಗ, ಲಕ್ಕುಂಡಿ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ 50ಕ್ಕೂ ಹೆಚ್ಚು ಕುಸ್ತಿಪಟುಗಳು ಭಾಗವಹಿಸಿದ್ದರು.

ಆರಂಭಿಕ ಪಂದ್ಯದಲ್ಲಿ ಭಾರಿ ಸೆಣೆಸಾಟ ನಡೆಸುವ ಸೂಚನೆ ನೀಡಿದ ಕುಸ್ತಿಪಟು ಕೊಲ್ಲಾಪುರದ ರಿಚರ್ಡ್‌ ಅವರನ್ನು ಹರಪನಹಳ್ಳಿಯ ನಾಗರಾಜ ಕ್ಷಣಾರ್ಧದಲ್ಲೆ ಚಿತ್ ಮಾಡಿದರು. ನೆರೆದಿದ್ದ ನೂರಾರು ಕುಸ್ತಿಪ್ರೇಮಿಗಳು ಕೇಕೆ, ಶಿಳ್ಳೆ ಹಾಕಿ ಹುರಿದುಂಬಿಸಿದರು. ಹಲವು ಕುಸ್ತಿ ಪಟುಗಳು ಅನಿರೀಕ್ಷಿತ ಫಲಿತಾಂಶ ನೀಡುವ ಮೂಲಕ ನೆರದಿದ್ದವರನ್ನು ಚಕಿತಗೊಳಿಸಿದರು.

ಗಮನ ಸೆಳೆದ ಮಹಿಳಾ ಕುಸ್ತಿ: ಕುಸ್ತಿಯಲ್ಲಿ ಈ ಬಾರಿ ವಿಶೇಷ ಆಕರ್ಷಣೆ ಮಹಿಳೆಯರ ಕುಸ್ತಿ. ಮಹಿಳಾ ಕುಸ್ತಿ ಪಂದ್ಯಾವಳಿಯಲ್ಲಿ ಮಹಾರಾಷ್ಟ್ರ ಕೇಸರಿ ಪ್ರಶಸ್ತಿ ಪುರಸ್ಕೃತೆ ಪುಣೆಯ ರೂಪಾಲಿ ಮತ್ತು ಆಲ್‌ ಇಂಡಿಯಾ ಚಾಂಪಿಯನ್ ಶ್ವೇತಾ ಕೊಲ್ಲಾಪುರ ಅವರ ಕಾಳಗ ರೋಚಕವಾಗಿತ್ತು. ಇಬ್ಬರೂ ವಿವಿಧ ಪಟ್ಟುಗಳನ್ನು ಪ್ರದರ್ಶಿಸಿದರು.

ಅಂತಿಮವಾಗಿ ಕೊಲ್ಲಾಪುರದ ಶ್ವೇತಾ ಅವರು ರೂಪಾಲಿ ಸೋಲುಂಡರು. ಸತತ ಎರಡೂವರೆ ಗಂಟೆಗಳ ಕಾಲ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ 15ಕ್ಕೂ ಹೆಚ್ಚು ಪಟುಗಳು ಭಾಗವಹಿಸಿದ್ದರು. ಕುಸ್ತಿ ಅಖಾಡದ ಸುತ್ತುತ್ತಿದ್ದ ಹಲಗೆ ವಾದಕರ ವಾದನವಂತೂ ಕುಸ್ತಿ ಪಟುಗಳನ್ನು ರಣಯುದ್ಧಕ್ಕೆ ಸಿದ್ಧಪಡಿಸುವಂತಿತ್ತು.

ಇದಕ್ಕೂ ಮುನ್ನ ಕುಸ್ತಿ ಪಂದ್ಯಾವಳಿಯನ್ನು ಉದ್ಘಾಟಿಸಿದ ಶಾಸಕ ಎಸ್‌.ಭೀಮಾನಾಯ್ಕ, ಹಿಂದಿನ ಮೈಸೂರು, ವಿಜಯನಗರ ಅರಸರ ಆಡಳಿತವಧಿಯಲ್ಲಿ ಜನಪ್ರಿಯತೆ ಪಡೆದಿದ್ದ ಕುಸ್ತಿ ಈ ಭಾಗದಲ್ಲಿ ಇಂದಿಗೂ ತನ್ನ ಜನಪ್ರಿಯತೆ ಉಳಿಸಿಕೊಂಡಿದೆ.

ಕುಸ್ತಿ ಗಂಡು ಕಲೆಯಾಗಿದೆ, ರಾಜ್ಯ ಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಿದ ಹಿರಿಯ ಕುಸ್ತಿ ಪಟುಗಳಿಗೆ ಸರ್ಕಾರದಿಂದ ವಿವಿಧ ಸೌಲಭ್ಯ ಕಲ್ಪಿಸಲಾಗುವುದು. ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗುವುದು ಎಂದು ತಿಳಿಸಿದರು.

ಪುರಸಭೆ ಅಧ್ಯಕ್ಷ ತಳವಾರ ರಾಘವೇಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷ ಯು.ಬಾಬುವಲಿ, ಸದಸ್ಯರಾದ ಜೋಗಿ ಹನುಮಂತಪ್ಪ, ಹಂಚಿನಮನಿ ಹನುಮಂತಪ್ಪ, ಡಿಶ್ ಮಂಜುನಾಥ, ಮುಖಂಡರಾದ ಹೂಗಾರ ಮಲ್ಲಿಕಾರ್ಜುನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT