ಹರಿಹರ: ತಾಲ್ಲೂಕಿನ ಬನ್ನಿಕೋಡು ಗ್ರಾಮದಲ್ಲಿ ದಲಿತರಿಗೆ ಕ್ಷೌರ ಮಾಡಲು ನಿರಾಕರಿಸಿದ ಕಾರಣ ಬುಧವಾರ ದಲಿತ ಮತ್ತು ಸವರ್ಣಿಯರ ಮಧ್ಯೆ ವಾಗ್ವಾದ ನಡೆಯಿತು.
ಬನ್ನಿಕೋಡು ಗ್ರಾಮದಲ್ಲಿ ಪಂಪಣ್ಣ ಎಂಬುವವರ ಕ್ಷೌರದ ಅಂಗಡಿಯಲ್ಲಿ ದಲಿತರಿಗೆ ಸೇವೆ ಒದಗಿಸುತ್ತಿಲ್ಲ ಎಂದು ದಲಿತ ಮುಖಂಡ ವಾಗೀಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಅಂಗಡಿ ಮಾಲೀಕ ಹಾಗೂ ದಲಿತರ ನಡುವೆ ವಾಗ್ವಾದ ನಡೆದು, ಕೆಲಕಾಲ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು.
ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ರೆಹಾನ್ ಪಾಷಾ ಹಾಗೂ ಸಿಪಿಐ ಲಕ್ಷ್ಮಣ ನಾಯ್ಕ ಗ್ರಾಮದಲ್ಲಿ ಶಾಂತಿ ಸಭೆ ನಡೆಸಿ, ವಾತಾವರಣ ತಿಳಿಗೊಳಿಸಿದರು.