ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯಾವ ಸಭಾ ಹುಟ್ಟಿದರೂ ಗುರಿ ಮುಟ್ಟದು’

ಜಾಗತಿಕ ಲಿಂಗಾಯತ ಮಹಾಸಭಾ ರಚನೆಗೆ ರಂಭಾಪುರಿ ಸ್ವಾಮೀಜಿ ಟೀಕೆ
Last Updated 24 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಳಗಾವಿ: ‘ಅಖಿಲ ಭಾರತ ವೀರಶೈವ ಮಹಾಸಭಾಕ್ಕೆ ಪರ್ಯಾಯವಾಗಿ ಯಾವುದೇ ಸಭಾ ಹುಟ್ಟಿದರೂ ಅದು ಗುರಿ ಮುಟ್ಟಲು ಸಾಧ್ಯವಿಲ್ಲ’ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ಉಷಾ ಕಾಲೊನಿಯಲ್ಲಿ ಮಹಾಲಕ್ಷ್ಮಿ ದೇವಸ್ಥಾನದ ಜಾತ್ರಾ ಮಹೋತ್ಸವ ಅಂಗವಾಗಿ ಬುಧವಾರ ನಡೆದ ಧರ್ಮಸಭೆಯಲ್ಲಿ ಅವರು ಮಾತನಾಡಿದರು. ‘ವೀರಶೈವ–ಲಿಂಗಾಯತ ಎರಡೂ ಒಂದೇ ಎನ್ನುವ ಮಹಾಸಭಾ ನಿರ್ಧಾರಕ್ಕೆ ಪಂಚಪೀಠಗಳವರು ಹಾಗೂ ವಿರಕ್ತ ಮಠಾಧೀಶರು ಬದ್ಧರಾಗಿದ್ದೇವೆ’ ಎಂದು ಹೇಳಿದರು.

‘ವೀರಶೈವ ಲಿಂಗಾಯತ ಧರ್ಮದ ಹೆಸರಿನಲ್ಲಿ ಎಷ್ಟೋ ಸಂಘ– ಸಂಸ್ಥೆಗಳು ಹುಟ್ಟಬಹುದು. ಹುಟ್ಟು ಹಾಕುವುದು ಸುಲಭ. ಆದರೆ, ಕಟ್ಟಿದ್ದನ್ನು ಬೆಳೆಸುವುದು ಸುಲಭವಲ್ಲ. ಮಾತನಾಡುವುದು ಸುಲಭ. ಅದರಂತೆ ನಡೆದುಕೊಳ್ಳುವುದು ತುಂಬಾ ಕಷ್ಟ. ಪಂಚ ಪೀಠಗಳು ಬೋಧನೆಗಷ್ಟೇ ಸೀಮಿತಗೊಳ್ಳದೇ ಸಂಸ್ಕೃತಿ, ಸದಾಚಾರ, ಬೆಳೆಸಲು ಪ್ರಾಮಾಣಿಕ ಪ್ರಯತ್ನವನ್ನು ಇಂದಿಗೂ ಮಾಡುತ್ತಾ ಬಂದಿವೆ’ ಎಂದರು.

ಒಳಗಿನ ವೈರಿಗಳೇ ಹೆಚ್ಚು: ‘ವೀರಶೈವ ಧರ್ಮಕ್ಕೆ ಹೊರಗಿನವರಿಗಿಂತ ಒಳಗಿರುವ ವೈರಿಗಳೇ ಹೆಚ್ಚಾಗಿದ್ದಾರೆ’ ಎಂದು ವಿಷಾದಿಸಿದರು.

‘ವೀರಶೈವ ಧರ್ಮ ಉದಾತ್ತ ಮೌಲ್ಯಗಳನ್ನು ಬೆಳೆಸುತ್ತಿದೆ. ಎಲ್ಲ ಸಮುದಾಯಗಳಿಗೂ ಒಳಿತನ್ನೇ ಮಾಡುತ್ತಾ ಬಂದಿದೆ. ಈ ಧರ್ಮವೃಕ್ಷದ ಬೇರುಗಳು ಬಹಳ ಭದ್ರವಾಗಿವೆ. ಆದರೂ, ಕಾಲಕಾಲಕ್ಕೆ ದಬ್ಬಾಳಿಕೆ ನಡೆಯುತ್ತಲೇ ಬಂದಿದೆ. ಈ ಧರ್ಮದ ಸಂಸ್ಕೃತಿ ನಾಶಗೊಳಿಸಲು ಯಾರಿಂದಲೂ ಸಾಧ್ಯವಾಗಿಲ್ಲ’ ಎಂದು ಪ್ರತಿಪಾದಿಸಿದರು.

‘ವೀರಶೈವ ಧರ್ಮಕ್ಕೆ ಅಷ್ಟಾವರಣ, ಪಂಚಾಚಾರ ಮತ್ತು ಷಟ್‌ಸ್ಥಲಗಳು ಮೂಲಾಧಾರವಾಗಿವೆ. ಇವುಗಳಲ್ಲಿ ನಂಬಿಕೆ, ಶೃದ್ಧೆ ಇಲ್ಲದವರು ವೀರಶೈವರಲ್ಲ, ಲಿಂಗಾಯತರೂ ಅಲ್ಲ. ಆಚರಣೆಯಿಂದ ಮಾತ್ರ ವೀರಶೈವರಾಗಬಹುದೇ ಹೊರತು ಕೇವಲ ಮಾತಿನಿಂದಲ್ಲ. ಪಂಚಪೀಠಗಳ ಜನಪ್ರಿಯತೆ ಮತ್ತು ಅದ್ಭುತ ಶಕ್ತಿ ಕಂಡು ದ್ವೇಷ, ಅಸೂಯೆಯಿಂದ ಕೆಲವರು ಮಾತನಾಡುತ್ತಾರೆ. ನೀತಿ ಸಂಹಿತೆ ಮೀರಿ ನಡೆದವರಾರಿಗೂ ಒಳಿತಾಗಿಲ್ಲ’ ಎಂದು ಮಾರ್ಮಿಕವಾಗಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT