ನವದೆಹಲಿ: ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಲ್ಲಿ ನಿರ್ಮಿಸಿದ ಸುಧಾರಿತ ‘ಸಾರಸ್ ಪಿಟಿ1’ ಪುಟ್ಟ ವಿಮಾನ ಬಿಡದಿ ಬಳಿ ಸಂಭವಿಸಿದ ಭೀಕರ ಅಪಘಾತದ 9 ವರ್ಷದ ಬಳಿಕ ಬುಧವಾರ ಬೆಂಗಳೂರಿನ ಆಗಸದಲ್ಲಿ ತನ್ನ ಮೊದಲ ಹಾರಾಟ ನಡೆಸಿತು.
ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದಿಂದ ಬೆಳಗ್ಗೆ 11ಕ್ಕೆ ಆಗಸಕ್ಕೆ ಹಾರಿದ ವಿಮಾನ 40 ನಿಮಿಷ ನಗರದ ಪ್ರದಕ್ಷಿಣೆ ಹಾಕಿತು. ಭಾರತೀಯ ವಾಯುಸೇನೆಯ ಮೂವರು ಪೈಲಟ್ಗಳು ವಿಮಾನದಲ್ಲಿದ್ದರು.
ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ ಕೇಂದ್ರದ (ಸಿಎಸ್ಐಆರ್) ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಾಲಯ 14 ಆಸನಗಳ ಈ ವಿಮಾನವನ್ನು ಅಭಿವೃದ್ಧಿಪಡಿಸಿದೆ.
ಸಿಎಸ್ಐಆರ್ ಅಭಿವೃದ್ಧಿಪಡಿಸಿದ್ದ ಸಾರಸ್ ಪಿಟಿ2 ವಿಮಾನ 9 ವರ್ಷಗಳ ಹಿಂದೆ ಬಿಡದಿ ಸಮೀಪದ ಶೇಷಗಿರಿಹಳ್ಳಿ ಬಳಿ ಪತನಗೊಂಡಿತ್ತು. ವಾಯುಸೇನೆಯ ಮೂವರು ಸಿಬ್ಬಂದಿ ಈ ದುರ್ಘಟನೆಯಲ್ಲಿ ಮೃತಪಟ್ಟಿದ್ದರು.
ಈ ಘಟನೆಯ ನಂತರ ಪಿಟಿ1 ವಿಮಾನದಲ್ಲಿ ಸಾಕಷ್ಟು ತಾಂತ್ರಿಕ ಮಾರ್ಪಾಡು ಮತ್ತು ವಿನ್ಯಾಸದಲ್ಲಿ ಸುಧಾರಣೆ ಮಾಡಲಾಗಿದೆ ಎಂದು ಎನ್ಎಎಲ್ ನಿರ್ದೇಶಕ ಜಿತೇಂದ್ರ ಜಾಧವ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಅನುಮತಿ ಪಡೆದು ನಾಗರಿಕ ವಿಮಾನಯಾನ ಮತ್ತು ಭಾರತೀಯ ಸೇನೆಯ ಬೇಡಿಕೆಗೆ ಅನುಗುಣ
ವಾಗಿ ಸಾರಸ್ ವಿಮಾನವನ್ನು ವಾಣಿಜ್ಯ ಬಳಕೆಗೆ ನಿರ್ಮಾಣ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.