ನವದೆಹಲಿ: ರಾಜ್ಯದ ಹುಬ್ಬಳ್ಳಿ ಮತ್ತು ಕೊಪ್ಪಳ ನಗರಗಳಿಂದ ದೇಶದ ವಿವಿಧ 10 ನಗರಗಳಿಗೆ ‘ಉಡಾನ್’ ಯೋಜನೆ ಅಡಿ ವಿಮಾನ ಸಂಚಾರ ಆರಂಭಿಸಲು ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದೆ.
ಬುಧವಾರ ಇಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಸ್ಪೈಸ್ ಜೆಟ್, ಇಂಡಿಗೊ, ಗೊಡಾವತ್, ಟರ್ಬೋ ಏವಿಯೇಷನ್ ಹಾಗೂ ಅಲಯನ್ಸ್ ಏರ್ ವಿಮಾನಯಾನ ಸಂಸ್ಥೆಗಳು ಈ ಎರಡೂ ನಗರಗಳಿಂದ ವಿಮಾನ ಹಾರಾಟಕ್ಕೆ ಅನುಮತಿ ಪಡೆದವು.
ಪ್ರಾದೇಶಿಕ ಸಂಪರ್ಕ ಯೋಜನೆ (ಉಡಾನ್) ಅಡಿ ಗರಿಷ್ಠ ಶೇ 50ರಷ್ಟು ಆಸನಗಳನ್ನು ಮೀಸಲಿರಿಸಿ, ಗರಿಷ್ಠ ಪ್ರಯಾಣ ದರ ನಿಗದಿ ಮಾಡಲಾಗಿದೆ. ಮಿಕ್ಕ ಆಸನಗಳಿಗಾಗಿ ಆಯಾ ಸಂಸ್ಥೆಗಳು ಸಾಮಾನ್ಯ ದರ ಆಕರಿಸಲಿವೆ.
ಮುಂಬೈ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಭಾಗದ ಹುಬ್ಬಳ್ಳಿ ಮತ್ತು ಕೊಪ್ಪಳ ನಗರಗಳಿಂದ ಉಡಾನ್ ಯೋಜನೆ ಜಾರಿಗೊಳಿಸುವಲ್ಲಿ ನಾಗರಿಕ ವಿಮಾನಯಾನ ಸಚಿವರಾದ ಅಶೋಕ್ ಗಜಪತಿ ರಾಜು ಹಾಗೂ ಜಯಂತ ಸಿನ್ಹಾ ಅವರು ಶ್ರಮಿಸಿದ್ದಾರೆ ಎಂದು ತಿಳಿಸಿರುವ ಸಂಸದರಾದ ಪ್ರಹ್ಲಾದ್ ಜೋಶಿ ಹಾಗೂ ಕರಡಿ ಸಂಗಣ್ಣ ಅವರಿಬ್ಬರನ್ನೂ ಅಭಿನಂದಿಸಿದರು.ಪ್ರಾದೇಶಿಕವಾಗಿ ಮಹತ್ವದ ನಗರಗಳಿಗೆ ವಿಮಾನ ಮೂಲಕ ನಾಗರಿಕರು ತೆರಳುವ ಸೌಲಭ್ಯ ಕಲ್ಪಿಸಲು ‘ಉಡಾನ್’ ಯೋಜನೆ ರೂಪಿಸಲಾಗಿದೆ.