ಬೆಂಗಳೂರು: ‘ಐ ಚೇಂಜ್ ಮೈ ಸಿಟಿ’ ನಡೆಸಿದ ರಾಷ್ಟ್ರೀಯ ಮಟ್ಟದ ‘ಸಿವಿಕ್ ಚಾಲೆಂಜ್’ ಸ್ಪರ್ಧೆಯಲ್ಲಿ 27 ನಗರಗಳಿಂದ 31,300 ವಿದ್ಯಾರ್ಥಿಗಳಿಂದ ಒಟ್ಟು 4,022 ನಾಗರಿಕ ಯೋಜನೆಗಳು ಬಂದಿದ್ದವು.
ನಗರದಲ್ಲಿ ಬುಧವಾರ ನಡೆದ ‘ಬೆಂಗಳೂರು ಉತ್ಸವ’ ಕಾರ್ಯಕ್ರಮದಲ್ಲಿ ನಾಗರಿಕರ ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳು ಬೆಳಕು ಚೆಲ್ಲಿದರು.
ಸಂಚಾರ ನಿರ್ವಹಣೆ, ತ್ಯಾಜ್ಯ ಸ್ಥಳಗಳ ಶುದ್ಧೀಕರಣ, ರಸ್ತೆ ಗುಂಡಿಗಳನ್ನು ಮುಚ್ಚುವುದು, ಬೀದಿ ದೀಪಗಳು ಮತ್ತು ಕಸದ ತೊಟ್ಟಿಗಳ ಸ್ಥಾಪನೆ, ಸಾರ್ವಜನಿಕರ ಲೆಕ್ಕಪರಿಶೋಧನೆ, ಶೌಚಾಲಯಗಳು ಮತ್ತು ಶೂನ್ಯ ಪ್ಲಾಸ್ಟಿಕ್ ಬಳಕೆ ಕುರಿತು ಮಕ್ಕಳು ಕಿರು ನಾಟಕಗಳನ್ನು ಪ್ರಸ್ತುತಪಡಿಸಿದರು.
ವಿದ್ಯಾರಣ್ಯಪುರದ ರಿವರ್ಡೆಲ್ ಪಬ್ಲಿಕ್ ಶಾಲೆ ‘ಜನಪ್ರಿಯ ಆಯ್ಕೆ’ ಪ್ರಶಸ್ತಿ ಗೆದ್ದುಕೊಂಡಿತು. ‘ನಮ್ಮ ಯೋಜನೆಗಾಗಿ ದೊಡ್ಡಬೆಟ್ಟಹಳ್ಳಿಯನ್ನು ಆಯ್ಕೆ ಮಾಡಿಕೊಂಡಿದ್ದೆವು. ರಸ್ತೆಯಲ್ಲಿನ ಕಸ ಮತ್ತು ನಿಂತ ನೀರನ್ನು ಸ್ವಚ್ಛಗೊಳಿಸಿದೆವು. ನಿಯಮಿತವಾಗಿ ಕಸ ಸಂಗ್ರಹ, ಸ್ವಚ್ಛತಾ ಕೆಲಸ ಮಾಡಿದೆವು. ಬೀದಿ ದೀಪಗಳನ್ನು ಬದಲಿಸಿದೆವು. ಹದಗೆಟ್ಟಿದ್ದ ಅಲ್ಲಿನ ವಾತಾವರಣ ನಮ್ಮ ಪ್ರಯತ್ನದಿಂದ ಸ್ವಚ್ಛ ಹಾಗೂ ವ್ಯವಸ್ಥಿತವಾಯಿತು’ ಎಂದು ಶಾಲೆಯ ವಿದ್ಯಾರ್ಥಿ ಪ್ರಕೃತಿ ವಿವರಿಸಿದರು.
ವಿದ್ಯಾರ್ಥಿಗಳು ಸಮಸ್ಯೆಗಳ ಪರಿಹಾರಕ್ಕಾಗಿ ಸ್ಥಳೀಯ ಪಾಲಿಕೆ ಸದಸ್ಯರು, ನಾಗರಿಕ ಸಂಸ್ಥೆಗಳು ಹಾಗೂ ನಾಗರಿಕರನ್ನು ತೊಡಗಿಸಿಕೊಂಡು ಪರಿಹಾರ ಕಂಡುಕೊಂಡಿದ್ದಾರೆ. ಯೋಜನೆಗಳ ವೈವಿಧ್ಯ, ಪ್ರಾಯೋಗಿಕತೆ ಆಧಾರದ ಮೇಲೆ 10 ತಂಡಗಳಿಗೆ ಬಹುಮಾನ ನೀಡಲಾಯಿತು.
ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್, ಬಿಬಿಎಂಪಿ ವಿಶೇಷ ಆಯುಕ್ತ ಮನೋಜ್ ರಾಜನ್, ಜನಾಗ್ರಹ ಸಂಘಟನೆಯ ಸಹ ಸಂಸ್ಥಾಪಕಿ ಸ್ವಾತಿ ರಾಮನಾಥನ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.