ಬೆಂಗಳೂರು: ‘ಆರ್ಯ ಈಡಿಗ ಜನಾಂಗದ ಸಮುದಾಯ ಭವನ ನಿರ್ಮಾಣಕ್ಕೆ ರಾಜರಾಜೇಶ್ವರಿ ನಗರದಲ್ಲಿ ಉಚಿತವಾಗಿ ನಿವೇಶನ ಕಲ್ಪಿಸುತ್ತೇವೆ’ ಎಂದು ಶಾಸಕ ಮುನಿರತ್ನ ಭರವಸೆ ನೀಡಿದರು.
ರಾಜರಾಜೇಶ್ವರಿ ನಗರದಲ್ಲಿ ಆಯೋಜಿಸಿದ್ದ ಬೆಂಗಳೂರು ದಕ್ಷಿಣ ತಾಲ್ಲೂಕು ಆರ್ಯ ಈಡಿಗರ ಸಂಘದ ಉದ್ಘಾಟನೆ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯಲ್ಲಿ ಅವರು ಮಾತನಾಡಿದರು.
ರಾಜರಾಜೇಶ್ವರಿ ನಗರದಲ್ಲಿ ಸ್ಥಾಪಿಸಿರುವ ಬ್ರಹ್ಮಶ್ರೀ ನಾರಾಯಣ ಗುರುಗಳ ಪುತ್ಥಳಿಯನ್ನು ಮುಂಬರುವ ಶಿವರಾತ್ರಿ ಹಬ್ಬದಂದು ಲೋಕಾರ್ಪಣೆ ಮಾಡಲಾಗುತ್ತದೆ ಎಂದರು.
ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ರಾಜ್ಕುಮಾರ್, ‘ಜನಾಂಗದವರು ಮತ್ತಷ್ಟು ಸಂಘಟಿತರಾಗಬೇಕು. ರಾಜಕೀಯ ಹಾಗೂ ಶೈಕ್ಷಣಿಕವಾಗಿ ಮುಂದೆ ಬರಬೇಕು’ ಎಂದು ಹೇಳಿದರು.
ನಾರಾಯಣಗುರು, ಎಸ್.ಬಂಗಾರಪ್ಪ, ಡಾ. ರಾಜ್ಕುಮಾರ್, ಜೆ.ಪಿ.ನಾರಾಯಣಸ್ವಾಮಿ, ಎಂ.ತಿಮ್ಮೇಗೌಡ, ನೆಟ್ಟಕಲ್ಲಪ್ಪ ಸೇರಿದಂತೆ ಹಲವರು ಸಮುದಾಯದ ಏಳಿಗೆಗೆ ದುಡಿದಿದ್ದಾರೆ. ಅವರ ಹಾದಿಯಲ್ಲಿ ಯುವ ಪೀಳಿಗೆ ಮುಂದುವರಿಯಬೇಕು ಎಂದರು.
ರಾಜ್ಯ ಈಡಿಗ ಸಂಘದ ಅಧ್ಯಕ್ಷ ಎಂ.ತಿಮ್ಮೇಗೌಡ, ‘ಜಾತ್ಯತೀತ ಪಕ್ಷದಿಂದ ಮಾತ್ರ ಹಿಂದುಳಿದ ಜನಾಂಗದವರು ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಉದ್ಯಮ ಕ್ಷೇತ್ರದಲ್ಲಿ ಮುಂದೆ ಬರಲು ಸಾಧ್ಯ’ ಎಂದರು.