ಬೆಂಗಳೂರು: ಬಿಎಂಟಿಸಿಯು ಗುರುವಾರ ಬೆಳಿಗ್ಗೆ ಬಸ್ಗಳನ್ನು ರಸ್ತೆಗಿಳಿಸಿತ್ತು. ಆದರೆ, ಕನ್ನಡ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಸಂಚಾರ ಸ್ಥಗಿತಗೊಳಿಸಿದೆ.
ಮೆಜೆಸ್ಟಿಕ್ನಲ್ಲಿ ಬಸ್ಗಳ ಸಂಚಾರವಿತ್ತು. ವಿಷಯ ತಿಳಿದು ಸ್ಥಳಕ್ಕೆ ಬಂದ ಪ್ರತಿಭಟನಾಕಾರರು ಗಲಾಟೆ ಮಾಡಿದ್ದಾರೆ. ಬಲವಂತವಾಗಿ ಪ್ರಯಾಣಿಕರನ್ನು ಬಸ್ಗಳಿಂದ ಕೆಳಗೆ ಇಳಿಸಿದ್ದಾರೆ. ಹೀಗಾಗಿ ಸಂಚಾರ ಸ್ಥಗಿತಗೊಳಿಸಿದ್ದೇವೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದರು.
'ಪರಿಸ್ಥಿತಿ ಅನುಗುಣವಾಗಿ ಬಸ್ಗಳ ಸಂಚಾರಕ್ಕೆ ಅವಕಾಶ ನೀಡುವಂತೆ ಎಲ್ಲ ಡಿಪೊಗಳ ವ್ಯವಸ್ಥಾಪಕರಿಗೆ ಸೂಚನೆ ನೀಡಿದ್ದೇವೆ' ಎಂದು ಹೇಳಿದರು.
ಮೆಟ್ರೊ ಸಂಚಾರ ಯಥಾಸ್ಥಿತಿ ಇದ್ದು, ಪ್ರಯಾಣಿಕರು ಕಡಿಮೆ ಸಂಖ್ಯೆಯಲ್ಲಿ ನಿಲ್ದಾಣಗಳತ್ತ ಬರುತ್ತಿದ್ದಾರೆ.
ಹುಬ್ಬಳ್ಳಿಯಲ್ಲಿ ಬಂದ್ ಬಿಸಿ
ಹುಬ್ಬಳ್ಳಿ: ನಗರದಲ್ಲಿ ಗುರುವಾರ ಬಸ್ ಸಂಚಾರ ಆರಂಭವಾಗಿಲ್ಲ. ಸಂಸದ ಪ್ರಹ್ಲಾದ ಜೋಶಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.
ಪಾಲಿಕೆಯ ಆಸ್ಪತ್ರೆಯ ಆವರಣದಲ್ಲಿ ಇರುವ ಸಂಸದ ಪ್ರಹ್ಲಾದ ಜೋಶಿ ಅವರ ಕಚೇರಿಗೆ ಮುತ್ತಿಗೆ ಹಾಕಲು ಹೋರಾಟಗಾರರು ಮಾಡಿದ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದರು.
ಕರವೇ ಪ್ರತಿಭಟನೆ
ಬೆಳಗಾವಿ: ಮಹದಾಯಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ರೈಲು ತಡೆ
ಚಿತ್ರದುರ್ಗ: ಮಹದಾಯಿ ಹೋರಾಟ ಬೆಂಬಲಿಸಿ ನಗರದಲ್ಲಿ ಕರ್ನಾಟಕ ರಕ್ಷಾ ವೇದಿಕೆ ನಾರಾಯಣಗೌಡ ಬಣದಿಂದ ರೈಲು ತಡೆದು ಪ್ರತಿಭಟನೆ.
ಬಾಗಲಕೋಟೆ ಜಿಲ್ಲೆಯಲ್ಲಿ ಬಂದ್ ನೀರಸ
ಬಾಗಲಕೋಟೆ: ಮಲಪ್ರಭಾ ತಟದ ಬಾದಾಮಿ ಹೊರತುಪಡಿಸಿ ಬಾಗಲಕೋಟೆ ಜಿಲ್ಲೆಯಲ್ಲಿ ಬಂದ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯಿಂದ ನವಲಗುಂದ, ನರಗುಂದ ಮಾರ್ಗವಾಗಿ ಹುಬ್ಬಳ್ಳಿ ಧಾರವಾಡಕ್ಕೆ ಸಂಚರಿಸುವ ಬಸ್ಗಳ ಓಡಾಟ ಮಾತ್ರ ಸ್ಥಗಿತಗೊಳಿಸಲಾಗಿದೆ. ಉಳಿದಂತೆ ಬಸ್ ಸಂಚಾರ ಸಹಜವಾಗಿದೆ.