ಧರ್ಮಪುರ: ಸಮೀಪದ ಹರಿಯಬ್ಬೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಅಮ್ಮಾಜಿ ಕರಿಯಮ್ಮ ದೇವಿ ಮತ್ತು ಶ್ರೀ ಕರಿಯಮ್ಮ ದೇವಿ ದೇವಸ್ಥಾನದ ಲೋಕಾರ್ಪಣೆಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಬುಧವಾರ ನಡೆದವು.
ಹರಿಯಬ್ಬೆ ಗ್ರಾಮದ ಗ್ರಾಮ ದೇವತೆಯಾದ ಶ್ರೀ ಅಮ್ಮಾಜಿ ಕರಿಯಮ್ಮ ದೇವಿ ಶ್ರೀ ಕರಿಯಮ್ಮ ದೇವಿ ದೇವಸ್ಥಾನಗಳು ಒಂದೂವರೆ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಮೊದಲ ದಿನ ಚಂದ್ರವಳ್ಳಿ ಗ್ರಾಮದ ಈರಗಾರ ಮತ್ತು ತಿಮ್ಮಪ್ಪ, ಹರಿಯಬ್ಬೆಯ ಆಂಜನೇಯ, ಕರಿಯಮ್ಮ, ಮತ್ತು ಮಾರಮ್ಮ ದೇವರು ಮೂರ್ತಿಗಳ ಪುಷ್ಪಾಲಂಕಾರದ ಮೂಲಕ ವಾದ್ಯಗಳೊಂದಿಗೆ ನಡೆಯಿತು.
ಸಮೀಪದ ಮುಂಗುಸುವಳ್ಳಿ ಹಳ್ಳದಲ್ಲಿ ಜಲಧಿ ಮಹೋತ್ಸವು ಶ್ರೀ ಹಾವಿನವರ ಕಾಮರಾಯ ಕಟ್ಟೇಮನೆಯ ಶ್ರೀಹಾಲಪ್ಪಯ್ಯಸ್ವಾಮಿ ಮಠದ ಮಠಾಧೀಶರಾದ ವಿ.ಎಂ.ಚಂದ್ರಶೇಖರಯ್ಯ ನೇತೃತ್ವದಲ್ಲಿ ನಡೆದವು.
ಜಲಧಿ ಮಹೋತ್ಸವದ ಸಂದರ್ಭದಲ್ಲಿ ಎಡೆ ಪೂಜೆ ನಡೆಯಿತು. ನಂತರ ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ ವಾಚನ, ಕಂಕಣ ಪೂಜೆ, ಅಂಕುರಾರ್ಪಣೆ, ಕಲಸ ಪ್ರತಿಷ್ಠಾಪನೆ, ಪೂರ್ಣಾಹುತಿ, ಮಂಗಳಾರತಿ, ಪ್ರಸಾದ ವಿನಿಯೋಗ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮಗಳು ಜರುಗಿದವು.