ರಾಮನಾಥಪುರ: ‘ಮಾನಸಿಕ ನೆಮ್ಮದಿ ಕಂಡುಕೊಂಡು ಉತ್ತಮ ಆರೋಗ್ಯ ಹೊಂದಲು ಭಗವಂತನ ಆರಾಧನೆ ಅತಿಮುಖ್ಯ’ ಎಂದು ರಂಭಾಪುರಿ ಶಾಖಾ ಮಠದ ಕಾರ್ಜುವಳ್ಳಿ ಸುಕ್ಷೇತ್ರ ಹಿರೇಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಶಿವರುದ್ರಶೆಟ್ಟಿ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆ ಹಾಗೂ ಪ್ರಗತಿ ಬಂಧು ಸ್ವಸಹಾಯ ಒಕ್ಕೂಟದ ಸಹಯೋಗ ದಲ್ಲಿ ನಡೆದ ಧಾರ್ಮಿಕ ಜಾಗೃತಿ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಯಾವ ಮನೆಯಲ್ಲಿ ನಿತ್ಯ ದೇವರ ಪೂಜೆ ನಡೆಯುತ್ತದೆಯೋ ಅಲ್ಲಿ ಶಾಂತಿ, ನೆಮ್ಮದಿ ನೆಲಸಲು ಸಾಧ್ಯವಿದೆ ಎಂದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಯೋಗಾ ರಮೇಶ್ ಅವರು, ‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಧಾರ್ಮಿಕ ಸತ್ಕಾರ್ಯಗಳ ಮುಖೇನ ಸಮಾಜದ ಜನರಲ್ಲಿ ಉತ್ತಮ ಸಂಸ್ಕಾರ ಬೆಳೆಸುತ್ತಿದೆ’ ಎಂದು ಶ್ಲಾಘಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೈಸೂರು ವಲಯದ ನಿರ್ದೇಶಕ ವಿ.ವಿಜಯಕುಮಾರ್ ನಾಗನಾಳ ಅವರು, ‘ಜನೋಪಯೋಗಿ ಕಾರ್ಯ ಕೈಗೊಳ್ಳುವ ಸಂಘಗಳಿಂದ ವ್ಯಕ್ತಿ ಪರಿವರ್ತನೆಯಾಗಿ ಕುಟುಂಬಗಳು ಅಭಿವೃದ್ಧಿ ಕಾಣಲಿವೆ ಎಂದರು.
ಜಿ.ಪಂ ಮಾಜಿ ಸದಸ್ಯ ಎಚ್.ಎಸ್.ಶಂಕರ್ ಅವರು, ಮಾತನಾಡಿ, ಮಕ್ಕಳಿಗೆ ಎಳೆಯ ಪ್ರಾಯದಲ್ಲೇ ಉತ್ತಮ ಸಂಸ್ಕಾರ, ದೈವ ಭಕ್ತಿ, ವಿನಯ ಕಲಿಸಿ ಉತ್ತಮ ಪ್ರಜೆಯಾಗಿ ರೂಪಿಸಬೇಕು’ ಎಂದು ಸಲಹೆ ಮಾಡಿದರು.
ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ನರಸಿಂಹಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಬಸವಾಪಟ್ಟಣ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ರಾಜೇಶ್, ಸಂಸ್ಥೆಯ ಜಯಂತಿ, ಸುರೇಖಾ, ಶಶಿಧರ್, ಪುಟ್ಟರಾಜು ಉಪಸ್ಥಿತರಿದ್ದರು.