ಕೊಪ್ಪಳ: ಬಾಗ್ಯನಗರದ 9ನೇ ವಾರ್ಡ್ ಪಕ್ಕದಲ್ಲಿರುವ ಕಸವಿಲೇವಾರಿ ಸ್ಥಳವನ್ನು ಈ ಕೂಡಲೇ ಬೇರೆ ಕಡೆಗೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿ ಅಲ್ಲಿನ ನಿವಾಸಿಗಳು ಬುಧವಾರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
9ನೇ ವಾರ್ಡ್ ಪಕ್ಕದಲ್ಲಿ ಪಟ್ಟಣದ ಎಲ್ಲ ಕಸವಿಲೇವಾರಿ ಮಾಡಲಾಗುತ್ತಿದೆ. ಇದರಿಂದ ಸಾಕಷ್ಟು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇಲ್ಲಿನ ನಿವಾಸಿಗಳ ಮನೆಗಳಲ್ಲಿ ಒಬ್ಬರು ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದಕೆಲ್ಲ ಕಸ ವಿಲೇವಾರಿಯೇ ಕಾರಣವಾಗಿದೆ. ಇಲ್ಲಿ ಕಸ ವಿಲೇವಾರಿ ಮಾಡುವುದರಿಂದ ಕೆಟ್ಟವಾಸನೆ ಹಾಗೂ ಇಲ್ಲಿ ಉತ್ಪತ್ತಿಯಾಗುವ ಸೊಳ್ಳೆ, ನೋಣ, ಕ್ರಿಮಿಗಳು ಹತ್ತಿರದಲ್ಲಿ ವಾಸಿಸುವ ಜನರಿಗೆ ಹಲವು ರೀತಿಯ ರೋಗಳ ಭೀತಿ ಎದುರಾಗಿದೆ.
ಈ ಕುರಿತು ಪಟ್ಟಣ ಪಂಚಾಯಿತಿ ಹಾಗೂ ವಾರ್ಡ್ ಸದಸ್ಯರಿಗೆ ಮೌಖಿಕವಾಗಿ ಹಲವು ಬಾರಿ ದೂರು ನೀಡಿದ್ದೇವೆ. ಆದರೆ ಯಾವುದೇ ರೀತಿಯ ಪ್ರತಿಕ್ರಿಯೆ ಬಾರದ ಕಾರಣ ಲಿಖಿತವಾಗಿ ಮನವಿ ಸಲ್ಲಿಸಿದ್ದೇವೆ. 2 ತಿಂಗಳಲ್ಲಿ ಈ ಕಸ ವಿಲೇವಾರಿಯನ್ನು ಸ್ಥಳಾಂತರಿಸಬೇಕು ಎಂದು ಮನವಿ ಸಲ್ಲಿಸಿ, 6 ತಿಂಗಳು ಕಳೆದರೂ ಕ್ರಮ ಕೈಗೊಳ್ಳದ ಕಾರಣ ಸ್ವಯಂ ಪ್ರೇರಿತರಾಗಿ ಕಸದ ವಾಹನ ತಡೆದಿದ್ದೆವು. ಕಸ ವಿಲೇವಾರಿಯನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ನಿವಾಸಿಗಳು ಮನವಿಯಲ್ಲಿ ತಿಳಿಸಿದ್ದಾರೆ.