ಗಣಿತದ ವ್ಯಾಪ್ತಿ ಅಪರಿಮಿತ ಎನ್ನುವುದನ್ನು ಸಾಮಾನ್ಯ ಜನರಿಗೂ ಅರ್ಥ ಮಾಡಿಸಬೇಕು, ವಿಶಾಲ ಓದುವರ್ಗ ಸೃಷ್ಟಿಸಬೇಕು ಎಂಬ ಉದ್ದೇಶದಿಂದ 2017ರಿಂದ ‘ಭಾವನಾ’ ತ್ರೈಮಾಸಿಕ ನಿಯತಕಾಲಿಕೆ ಪ್ರಕಟವಾಗುತ್ತಿದೆ.
ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿರುವ ಸಿ.ಎಸ್ ಅರವಿಂದ ಅವರು ಈ ನಿಯತಕಾಲಿಕೆ ಪ್ರಧಾನ ಸಂಪಾದಕರು. 2017ರಲ್ಲಿ ನಾಲ್ಕು ಸಂಚಿಕೆಗಳು ಪ್ರಕಟವಾಗಿದೆ.
2018ರಿಂದ ಭಾವನಾ ಟ್ರಸ್ಟ್ ಮೂಲಕ ನಿಯತಕಾಲಿಕೆಯನ್ನು ಹೊರತರಲಿದ್ದಾರೆ. ಶನಿವಾರ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾವನಾ ಟ್ರಸ್ಟ್ ಉದ್ಘಾಟನೆಯಾಗಲಿದ್ದು, ಅಂದೇ ಈ ವರ್ಷದ ಮೊದಲ ನಿಯತಕಾಲಿಕೆ ಸಂಚಿಕೆ ಬಿಡುಗಡೆಯಾಗಲಿದೆ. ಈ ಕಾರ್ಯಕ್ರಮದಲ್ಲಿ ಬಾಹ್ಯಾಕಾಶ ವಿಜ್ಞಾನಿ ರೊದ್ದಂ ನರಸಿಂಹ, ಖ್ಯಾತ ಗಣಿತಜ್ಞ ಎಂ.ಎಸ್.ನರಸಿಂಹನ್ ಹಾಗೂ ಖ್ಯಾತ ವಿಜ್ಞಾನಿ ಕೆ.ಆರ್.ಶ್ರೀನಿವಾಸನ್ ಅವರಿಂದ ಗುಂಪು ಚರ್ಚೆಯೂ ನಡೆಯಲಿದೆ.
ಸಿ.ಎಸ್. ಅರವಿಂದ
‘ಭಾವನಾ’ ನಿಯತಕಾಲಿಕೆ ಇಂಗ್ಲಿಷ್ ಭಾಷೆಯಲ್ಲಿ ಪ್ರಕಟವಾಗುತ್ತಿದೆ. ಮುಂದೆ ಕನ್ನಡ ಭಾಷೆಯಲ್ಲೂ ಆರಂಭಿಸುವ ಉದ್ದೇಶ ಈ ಸಂಸ್ಥೆಗೆ ಇದೆ. ಈ ನಿಯತಕಾಲಿಕೆಯಲ್ಲಿ ಬೇರೆಬೇರೆ ಕ್ಷೇತ್ರಗಳಲ್ಲಿ ಗಣಿತದ ಬಳಕೆ, ಭೌತ, ರಸಾಯನ, ಕಂಪ್ಯೂಟರ್ ವಿಜ್ಞಾನಗಳಲ್ಲಿ ಗಣಿತದ ಪ್ರಸ್ತುತತೆ, ಗಣಿತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರ ಸಂದರ್ಶನಗಳು, ಗಣಿತ ಕೃತಿಗಳ ವಿಮರ್ಶೆ, ಗಣಿತದ ಅಧ್ಯಯನದಲ್ಲಿ ತೊಡಗಿರುವ ಸಂಸ್ಥೆಗಳ ಪರಿಚಯ ಬರಹಗಳು ಇರುತ್ತವೆ.
ರೊದ್ದಂ ನರಸಿಂಹ, ಇಂಗ್ಲೆಂಡಿನ ಪ್ರಸಿದ್ಧ ಗಣಿತಜ್ಞ ಸರ್ ಮೈಕೆಲ್ ಅಟಿಯಾ, ಅಮೆರಿಕದ ಪ್ರಸಿದ್ಧ ಗಣಿತಜ್ಞ, ಎಮೊರಿ ವಿಶ್ವವಿದ್ಯಾಲಯದ ಕೆನ್ ಒನೊ, ಗಣಿತಜ್ಞ ಲಿಯೊನ್ ಟಖ್ತಜನ್ ಸೇರಿದಂತೆ ಪ್ರತಿಷ್ಟಿತರ ಸಂದರ್ಶನ ಕಳೆದ ವರ್ಷ ಪ್ರಕಟವಾಗಿದೆ. ಜನವರಿ ಸಂಚಿಕೆಯಲ್ಲಿ ಗಣಿತಜ್ಞ ಸಿ.ಎಸ್.ಶೇಷಾದ್ರಿ ಅವರ ಸಂದರ್ಶನ ಪ್ರಕಟವಾಗಲಿದೆ. ಈ ನಿಯತಕಾಲಿಕೆಯು ಪ್ರಿಂಟ್ ಹಾಗೂ ವೆಬ್ ಎರಡೂ ರೂಪದಲ್ಲಿ ಲಭ್ಯ. ಸಂಪರ್ಕಕ್ಕೆ– editor@bhavana.org.in. ವೆಬ್ವಿಳಾಸ– bhavana.org.in/subscribe v
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.