ನವದೆಹಲಿ: ಗಣರಾಜ್ಯೋತ್ಸವ ಪಥಸಂಚಲನದ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಅತಿಗಣ್ಯರ ಗ್ಯಾಲರಿಯ ಆರನೇ ಸಾಲಿನಲ್ಲಿ ಕೂರಿಸಿದ್ದಕ್ಕೆ ಪಕ್ಷ ಆಕ್ಷೇಪ ವ್ಯಕ್ತಪಡಿಸಿದೆ.
ಈ ಮೂಲಕ ಆಡಳಿತ ಪಕ್ಷವು ಶಿಷ್ಟಾಚಾರವನ್ನು ಉಲ್ಲಂಘಿಸಿದೆ ಮತ್ತು ವಿಶ್ವದ ನಾಯಕರ ಎದುರು ಪಕ್ಷಕ್ಕೆ ಅವಮಾನ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಅತಿಗಣ್ಯರ ಗ್ಯಾಲರಿಯ ಮೊದಲ ಸಾಲಿನಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಅವರ ಪತ್ನಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಗೃಹಸಚಿವ ರಾಜನಾಥ್ ಸಿಂಗ್ ಮತ್ತು ಕೃಷಿ ಸಚಿವ ರಾಧಾಮೋಹನ್ ಸಿಂಗ್ ಮತ್ತು ಇನ್ನೂ ಕೆಲವು ಸಚಿವರು ಕುಳಿತಿದ್ದರು.
‘ರಾಹುಲ್ ಅವರನ್ನು ಮೊದಲು ನಾಲ್ಕನೇ ಸಾಲಿನಲ್ಲಿ ಕೂರಿಸುವುದಾಗಿ ಸರ್ಕಾರ ತಿಳಿಸಿತ್ತು. ನಂತರ ಆರನೇ ಸಾಲಿನಲ್ಲಿ ಕೂರಿಸಿತು. ಆದರೆ ಗಣರಾಜ್ಯೋತ್ಸವದ ಸಂಭ್ರಮ ನಮ್ಮ ಪಾಲಿಗೆ ಎಲ್ಲಕ್ಕಿಂತ ದೊಡ್ಡದು’ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಟ್ವೀಟ್ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಆಸಿಯಾನ್ ರಾಷ್ಟ್ರಗಳ ನಾಯಕರನ್ನು ರಾಹುಲ್ ಗಾಂಧಿ ಭೇಟಿ ಮಾಡದಂತೆ ತಡೆಯವ ಸಲುವಾಗಿ ಬಿಜೆಪಿ ಹೀಗೆ ಮಾಡಿದೆ ಎಂದು ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ.
ಆದರೆ ಶುಕ್ರವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಹುಲ್ ಅವರಿಗೆ ಎರಡನೇ ಸಾಲಿನಲ್ಲಿ ಆಸನದ ವ್ಯವಸ್ಥೆ ಮಾಡಲಾಗಿತ್ತು.