ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ಇಬ್ಬರು ಶಂಕಿತರನ್ನು ಬುಧವಾರ ವಶಕ್ಕೆ ಪಡೆದಿದ್ದಾರೆ.
2017ರ ಸೆ.5ರಂದು ಗೌರಿ ಹತ್ಯೆ ನಡೆದಿತ್ತು. ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ದೃಶ್ಯ ಆಧರಿಸಿ ಪೊಲೀಸರು ಹಂತಕನ ರೇಖಾಚಿತ್ರ ತಯಾರಿಸಿದ್ದರು. ಆ ಚಿತ್ರಕ್ಕೆ ಹೋಲಿಕೆಯಾಗುವ ಚಹರೆ ಹೊಂದಿರುವ ವ್ಯಕ್ತಿಗಳನ್ನು ಪೊಲೀಸರು ಬೆಳಗಾವಿಯಲ್ಲಿ ವಶಕ್ಕೆ ಪಡೆದಿದ್ದಾರೆ.
‘ಇವರಿಬ್ಬರೂ ಶಸ್ತ್ರಾಸ್ತ್ರ ಬಳಕೆಯಲ್ಲಿ ಪರಿಣಿತರು. ಅಲ್ಲದೆ, ಹತ್ಯೆ ನಡೆದ ದಿನ ನಗರದಲ್ಲೇ ಇದ್ದರು. ಆದರೆ, ಹತ್ಯೆಯಲ್ಲಿ ಇವರ ಪಾತ್ರವಿರುವುದು ಇನ್ನೂ ಖಚಿತವಾಗಿಲ್ಲ’ ಎಂದು ಮೂಲಗಳು ತಿಳಿಸಿವೆ.
‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಎಸ್ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್, ‘ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದೇವೆ. ಹತ್ಯೆ ಸಂಬಂಧ ಈವರೆಗೂ ಯಾರನ್ನೂ ಬಂಧಿಸಿಲ್ಲ’ ಎಂದು ಹೇಳಿದರು.