ಬೆಂಗಳೂರು: ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಜೂನ್ನಲ್ಲಿ ನಡೆಯಲಿರುವ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲು ಶಿಕ್ಷಕರಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿ ಪತ್ರ ಬರೆದಿದೆ.
ಕರ್ತವ್ಯದ ಅವಧಿ ಮುಗಿದ ಬಳಿಕ ಮತ್ತು ರಜಾ ದಿನಗಳಲ್ಲಿ ಅವಕಾಶ ನೀಡುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ, ತಾಂತ್ರಿಕ ಶಿಕ್ಷಣ ಇಲಾಖೆಗೆ ಸೂಚನೆ ನೀಡುವಂತೆ ಸಮಿತಿ ಅಧ್ಯಕ್ಷ ಸುಧಾಕರ ಹೊಸಳ್ಳಿ ಮನವಿ ಮಾಡಿದ್ದಾರೆ.
ಶಿಕ್ಷಕರಿಗೆ ಅವಕಾಶ ಇಲ್ಲದಿದ್ದರೆ ರಾಜಕೀಯ ಕಾರ್ಯಕರ್ತರ ನೇರ ಪಾಲುದಾರಿಕೆ ಹೆಚ್ಚಲಿದೆ. ಈ ನಡೆ ಶೈಕ್ಷಣಿಕ ಸ್ಥಿರತೆಗೆ ಧಕ್ಕೆ ಉಂಟು ಮಾಡಲಿದೆ ಎಂದೂ ಅವರು ಪತ್ರದಲ್ಲಿ ಹೇಳಿದ್ದಾರೆ.
ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಪೂರ್ಣಕಾಲಿಕ ಶಿಕ್ಷಕರು ಅಥವಾ ಶೈಕ್ಷಣಿಕ ಸಂಸ್ಥೆಗಳ ಪಾಲುದಾರರು ಮಾತ್ರ ಸ್ಪರ್ಧಿಸಬೇಕೆಂಬ ನಿಯಮ ಇಲ್ಲ. ಹೀಗಾಗಿ ಶಿಕ್ಷಕರೇತರರೇ ಹೆಚ್ಚಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಇದು ಶಿಕ್ಷಣ ಕ್ಷೇತ್ರದ ಸಬಲೀಕರಣಕ್ಕೆ ತದ್ವಿರುದ್ಧವಾಗಿದೆ ಎಂದೂ ಅವರು ತಿಳಿಸಿದ್ದಾರೆ.