ಬೆಂಗಳೂರು: ಮನೆ ಹೂಕುಂಡದಲ್ಲಿ ಗಾಂಜಾ ಗಿಡ ಬೆಳೆದ ಆರೋಪದ ಮೇಲೆ ಎರಡು ತಿಂಗಳಿನಿಂದ ಜೈಲಿನಲ್ಲಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿಗೆ ಹೈಕೊರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.
ಬಂಧಿತ ಬಂಟ್ವಾಳ ತಾಲ್ಲೂಕಿನ ಜೊಷುವಾ ಡಿಸೊಜ ಎಂಬ ಮೊದಲ ವರ್ಷದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿದೆ.
‘ಅರ್ಜಿದಾರರು ₹ 50 ಸಾವಿರ ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಇಷ್ಟೇ ಮೊತ್ತಕ್ಕೆ ಒಬ್ಬ ವ್ಯಕ್ತಿಯ ಭದ್ರತೆ ಒದಗಿಸಬೇಕು’ ಎಂದು ಷರತ್ತು ವಿಧಿಸಲಾಗಿದೆ.
ಪ್ರಕರಣವೇನು?: ‘ಮುನ್ನೂರು ಗ್ರಾಮದ ಕುತ್ತಾರ್ ಬಳಿಯ ಸಂತೋಷ್ ನಗರದಲ್ಲಿರುವ ಜೊಷುವಾ ಮನೆಯಲ್ಲಿ ಗಾಂಜಾ ಗಿಡ ಬೆಳೆದಿದ್ದಾನೆ’ ಎಂಬ ಮಾಹಿತಿ ಆಧಾರದ ಮೇರೆಗೆ ಅಪರಾಧ ಮತ್ತುಮಾದಕ ದ್ರವ್ಯ ಅಪರಾಧವಿಭಾಗದ ಪೊಲೀಸರು ದಾಳಿ ನಡೆಸಿದ್ದರು.
ದಾಳಿ ವೇಳೆ ಮನೆಯ ಹೂಕುಂಡದಲ್ಲಿ ಬೆಳೆದಿದ್ದ 74 ಗ್ರಾಂ ತೂಕದ ಎರಡು ಗಾಂಜಾ ಗಿಡ ಹಾಗೂ 8 ಗ್ರಾಂ ತೂಕದ ಗಾಂಜಾ ಬೀಜಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಗಿಡಗಳ ಮೌಲ್ಯ ₹ 2 ಸಾವಿರ ಎಂದು ಅಂದಾಜಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜೊಷುವಾ ಡಿಸೊಜಾ ವಿರುದ್ಧ, ಮಾದಕ ಪದಾರ್ಥ ನಿಯಂತ್ರಣಕಾಯ್ದೆ ಅಡಿ ಪ್ರಕರಣ ದಾಖಲಿಸಿ, 2017ರ ನವೆಂಬರ್ 7ರಂದು ಬಂಧಿಸಿದ್ದರು.