ಬೆಂಗಳೂರು: ‘ವಿದ್ಯಾರ್ಥಿಗಳು ದೇಶಪ್ರೇಮವನ್ನು ಮೈಗೂಡಿಸಿಕೊಂಡು ಪ್ರಜ್ಞಾವಂತ ನಾಗರಿಕರಾಗಿ ದೇಶಸೇವೆಗೆ ಸನ್ನದ್ಧರಾಗಬೇಕು’ ಎಂದು ಶಾಸಕ ಬಿ.ಎ.ಬಸವರಾಜ್ ಸಲಹೆ ನೀಡಿದರು.
ಕೆ.ಆರ್. ಪುರದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಮ್ಮಿಕೊಂಡಿದ್ದ 69ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶೈಕ್ಷಣಿಕ ಬದುಕನ್ನು ಸದುಪಯೋಗಪಡಿಸಿಕೊಂಡು ಭಾರತವನ್ನು ವಿಶ್ವಕ್ಕೆ ಮಾದರಿ ರಾಷ್ಟ್ರವಾಗಿಸುವತ್ತ ಹೆಜ್ಜೆ ಇಡಬೇಕು ಎಂದರು.
ಕೆ.ಆರ್.ಪುರ ಭಾಗದ ಸರ್ಕಾರಿ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಹಾಗು ಐಟಿಐ ವಿದ್ಯಾಮಂದಿರ, ಎಸ್.ಜೆ.ಇ.ಎಸ್ ಶಾಲೆ, ಭಾರತೀಯ ವಿದ್ಯಾನಿಕೇತನ ಶಾಲೆಗಳ ವಿದ್ಯಾರ್ಥಿಗಳು ಕವಾಯತು, ಸಮರಕಲೆ ಹಾಗೂ ನೃತ್ಯ ಪ್ರದರ್ಶಿಸಿದರು.
ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮತ್ತು ಯೋಧರ ಕುರಿತಾದ ನಾಟಕಗಳು ಜನಮನ ಸೆಳೆದವು. ಇದೇ ವೇಳೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು.