ಬೆಂಗಳೂರು: ಇಲ್ಲಿನ ‘ದಕ್ಷಿಣ ಕನ್ನಡ ಜೈನ ಮೈತ್ರಿಕೂಟ’ದ ವತಿಯಿಂದ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘33ನೇ ವಾರ್ಷಿಕೋತ್ಸವ’ದಲ್ಲಿ ಉಜಿರೆಯ ಎಸ್ಡಿಎಂ ಕಾಲೇಜಿನ ಡಾ. ಹಾಮಾನಾ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಎಸ್.ಡಿ.ಶೆಟ್ಟಿ ಅವರಿಗೆ ‘ಮಹಾಕವಿ ರತ್ನಾಕರವರ್ಣಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಪ್ರಶಸ್ತಿ ₹25 ಸಾವಿರ ನಗದು ಒಳಗೊಂಡಿದೆ.
ಎಸ್.ಡಿ.ಶೆಟ್ಟಿ ಮಾತನಾಡಿ, ‘ಭಾರತೀಯ ಸಂಸ್ಕೃತಿ ಮತ್ತು ಕನ್ನಡ ಭಾಷೆ ಉಳಿಯಲು ಪುಸ್ತಕ ಸಂಸ್ಕೃತಿ ಕಾರಣ. ಪುಸ್ತಕಕ್ಕಿಂತ ದೊಡ್ಡ ಆಸ್ತಿ ಬೇರೊಂದಿಲ್ಲ’ ಎಂದರು.
ದಕ್ಷಿಣ ಕನ್ನಡದ ಜೈನರು ಬುದ್ಧಿವಂತರು. ಆದರೆ, ಹಸ್ತಪ್ರತಿ, ಪುಸ್ತಕ ಓದುವುದರಲ್ಲಿ ಮತ್ತು ಪುಸ್ತಕ ಖರೀದಿಸುವುದರಲ್ಲಿ ಹಿಂದೆ ಬಿದ್ದಿದ್ದಾರೆ. ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೊಳದ ಮಠದ ಶಾಂತವೀರ ಸ್ವಾಮೀಜಿ, ‘ಎಲ್ಲೆಡೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಭಯ, ಆತಂಕದ ವಾತಾವರಣ ಸೃಷ್ಟಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಜೈನ ಧರ್ಮದ ಅಹಿಂಸಾ ತತ್ವ ಹೆಚ್ಚು ಪ್ರಸ್ತುತವೆನಿಸುತ್ತದೆ. ಎಲ್ಲ ಧರ್ಮಗಳ ಸಾರವೆನಿಸಿರುವ ಮಾನವೀಯ ತತ್ವಕ್ಕೆ ಒತ್ತು ನೀಡಬೇಕಿದೆ’ ಎಂದರು.
ಜೈನ ಧರ್ಮದ ಬಗ್ಗೆ ಅಧ್ಯಯನ ನಡೆಸುವವರಿಗೆ ಪುಸ್ತಕ ಹಾಗೂ ವಿದ್ಯಾರ್ಥಿ ವೇತನ ನೀಡುವುದು ಒಳಿತು ಎಂದರು.
ಇದೇ ವೇಳೆ ಬಿಡುಗಡೆಯಾದ ಧಾರಿಣಿದೇವಿ ಅವರ ‘ರತ್ನಾಕರ ಗೀತಾರ್ಥ’ ಭಾಗ–2ರ ಕುರಿತು ಲೇಖಕಿ ಎಸ್.ವಿಮಲಾ ಸುಮತಿಕುಮಾರ್ ಮಾತನಾಡಿದರು.
* ಮೂಡುಬಿದಿರೆಯಲ್ಲಿ ರತ್ನಾಕರವರ್ಣಿಯ ಪ್ರತಿಮೆಯನ್ನು ಮಾರ್ಚ್ನಲ್ಲಿ ಅನಾವರಣಗೊಳಿಸಲಾಗುತ್ತದೆ.
– ಡಿ.ಸುರೇಂದ್ರ ಕುಮಾರ್, ದಕ್ಷಿಣ ಕನ್ನಡ ಜೈನ ಮೈತ್ರಿಕೂಟದ ಅಧ್ಯಕ್ಷ