ಚಿತ್ರದುರ್ಗ: ನಟ ಪ್ರಕಾಶ್ ರೈ ಶನಿವಾರ ಫ್ಲೋರೈಡ್ ಸಮಸ್ಯೆ ಅಧಿಕವಾಗಿರುವ ಹಿರಿಯೂರು ತಾಲ್ಲೂಕಿನ ಬಂಡ್ಲಾರಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದರು.
ಗ್ರಾಮಸ್ಥರ ಸಹಭಾಗಿತ್ವದಲ್ಲಿ ಫ್ಲೋರೈಡ್ ನೀರಿನ ಸಮಸ್ಯೆ ಬಗೆಹರಿಸುವುದು, ಗ್ರಾಮದಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೂ ಪರಿಹಾರ ಹುಡುಕುವ ಮೂಲಕ ಮಾದರಿ ಗ್ರಾಮವಾಗಿಸುವ ಸಂಕಲ್ಪ ಮಾಡಿದರು.
ಗ್ರಾಮಸ್ಥರಿಂದಲೇ ಗ್ರಾಮದಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದ ರೈ, 'ನಿಮ್ಮ ಸಹಕಾರದಿಂದ ಮಾತ್ರ ಗ್ರಾಮದ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ. ಇದಕ್ಕೆ ನೀವೆಲ್ಲರೂ ಪಕ್ಷಾತೀತವಾಗಿ ಸಹಕರಿಸಬೇಕು. ಆಗ ಗ್ರಾಮದ ಅಭಿವೃದ್ಧಿ ಮಾತ್ರ ಸಾಧ್ಯ' ಎಂದರು.
ಜಲತಜ್ಞ ಎನ್ ದೇವರಾಜರೆಡ್ಡಿ ಬಂಡ್ಲಾರಹಟ್ಟಿಯಲ್ಲಿರುವ ಫ್ಲೊರೈಡ್ ನೀರಿನ ಸಮಸ್ಯೆ ಮತ್ತು ಅದರಿಂದ ಆಗುತ್ತಿರುವ ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.
ಬಂಡ್ಲಾರಹಟ್ಟಿಯ ಉಪನ್ಯಾಸಕ ರಮೇಶ್ ಮತ್ತು ಸುತ್ತಲಿನ ಗ್ರಾಮದ ಮುಖಂಡರು ಹಾಜರಿದ್ದರು.