ಸೋಮವಾರಪೇಟೆ: ‘ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತ ದೇಶವು ಹಲವು ಧರ್ಮಗಳ ಬೀಡಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ರಾಜೇಶ್ ಹೇಳಿದರು.
ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಶುಕ್ರವಾರ ನಡೆದ ಗಣರಾಜ್ಯೋತ್ಸವದಲ್ಲಿ ಅವರು ಮಾತನಾಡಿದರು.
‘ಹಲವು ಧರ್ಮ ಭಾಷೆಗಳಿರುವ ದೇಶದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದೆ. ದೇಶ ಬಲಿಷ್ಠ ಸೇನೆಯನ್ನು ಹೊಂದಿದ್ದು, ಸೈನಿಕರು ದೇಶ ರಕ್ಷಣೆಯಲ್ಲಿ ತೊಡಗಿಕೊಂಡಿದ್ದು, ಅವರ ತ್ಯಾಗ ಬಲಿದಾನವನ್ನು ಸದಾ ಗೌರವಿಸುವ ಕೆಲಸ ನಮ್ಮಿಂದಾಗಬೇಕು. ವಿದ್ಯಾರ್ಥಿ ದಿಸೆಯಿಂದಲೇ ಎಲ್ಲರು ದೇಶಪ್ರೇಮವನ್ನು ಮೈಗೂಡಿಸಿಕೊಂಡು, ದೇಶ ಕಟ್ಟುವ ಕೆಲಸ ಮಾಡಬೇಕು’ ಎಂದು ಕರೆ ನೀಡಿದರು.
ತಹಶೀಲ್ದಾರ್ ಪಿ.ಎಸ್.ಮಹೇಶ್, ಭಾರತೀಯ ಸಂವಿಧಾನ ರಚನೆಯಾದ ಸಂತೋಷ ನಮ್ಮೆಲ್ಲರದು. ದೇಶದಲ್ಲಿರುವ ಸಮಸ್ಯೆಗಳ ಸರಮಾಲೆ, ಬಡತನ, ನಿರುದ್ಯೋಗ, ಅನಕ್ಷರತೆ, ಜನಸಂಖ್ಯಾ ಸ್ಫೋಟ, ಭ್ರಷ್ಟಾಚಾರ, ಭಯೋತ್ಪಾದನೆ, ಕೋಮುವಾದ, ಪ್ರಾಂತೀಯವಾದ, ಇಂತಹ ಘನಘೋರ ಸಮಸ್ಯೆಗಳ ಸಂಪೂರ್ಣ ನಿವಾರಣೆ ಅಗತ್ಯವಾಗಿದೆ ಎಂದರು.
ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್, ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್, ತಾ.ಪಂ ಸದಸ್ಯೆ ತಂಗಮ್ಮ, ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾ ಮಾತನಾಡಿದರು.
ಬಿಇಒ ಸಿ.ಆರ್. ನಾಗರಾಜಯ್ಯ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಕೆ.ಎಂ. ಚಂದ್ರಶೇಖರ್ ವಂದಿಸಿದರು. ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಅಣ್ಣಮ್ಮ ಉಪಸ್ಥಿತರಿದ್ದರು. ಮಾಜಿ ಸೈನಿಕ ಅಭಿಮಠ ಬಾಚಳ್ಳಿ ಗ್ರಾಮದ ಎ.ಕೆ. ಮಾಚಯ್ಯ ಅವರನ್ನು ಸನ್ಮಾನಿಸಲಾಯಿತು.
ಸ್ವಚ್ಛಭಾರತ್ ಯೋಜನೆಯ ಸ್ವಚ್ಛ ವಿದ್ಯಾಲಯ ಪ್ರಶಸ್ತಿಯನ್ನು ಮಾದಾಪುರ ಡಿ. ಚನ್ನಮ್ಮ ಶಾಲೆ, ಸುಂಟಿಕೊಪ್ಪದ ಸರ್ಕಾರಿ ಪದವಿ ಪೂರ್ವ ಕಾಲೇಜು, ಗರಗಂದೂರು ಜಿಎಂಪಿ ಶಾಲೆ, ಗೋಣಿಮರೂರಿನ ಜಿಎಂಪಿ ಶಾಲೆ ಹಾಗೂ ವಿಶ್ವಮಾನವ ಕುವೆಂಪು ಶಾಲೆ ಪಡೆಯಿತು.
ಸ್ಪರ್ಧಾ ವಿಜೇತರು; ಸಾಂಸ್ಕೃತಿಕ ಸ್ಪರ್ಧೆ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಮಸಗೋಡು ಚನ್ನಮ್ಮ ಪ್ರಾಥಮಿಕ ಶಾಲೆ ಪ್ರಥಮ, ಒಎಲ್ವಿ ಹಾಗೂ ಸೋಮವಾರಪೇಟೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ದ್ವಿತೀಯ ಸ್ಥಾನ ಗಳಿಸಿದವು.
ಪ್ರೌಢಶಾಲಾ ವಿಭಾಗದಲ್ಲಿ ಒಕ್ಕಲಿಗರ ಸಂಘದ ಕುವೆಂಪು ಶಾಲೆ ಪ್ರಥಮ, ಸಂತ ಜೋಸೆಫರ ಶಾಲೆ ದ್ವಿತೀಯ, ಎಸ್ಜೆಎಂ ಬಾಲಿಕಾ ಶಾಲೆ ತೃತೀಯ ಸ್ಥಾನ ಗಳಿಸಿತು. ಕಾಲೇಜು ವಿಭಾಗದಲ್ಲಿ ಜೂನಿಯರ್ ಕಾಲೇಜು ಪ್ರಥಮ ಸ್ಥಾನಗಳಿಸಿತು.
ಐಗೂರಿನಲ್ಲಿ ಸಂಭ್ರಮ
ಸಮೀಪದ ಐಗೂರು ಸರ್ಕಾರಿ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಿ.ಎಸ್. ಪೊನ್ನಪ್ಪ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಭಾರ ಪ್ರಾಂಶುಪಾಲರಾದ ಎಚ್.ಕೆ. ಉಮೇಶ್ಕುಮಾರ್ ವಹಿಸಿದ್ದರು.
ಐಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಎಸ್. ಚಂಗಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯೆ ಸಬಿತಾ ಚೆನ್ನಕೇಶವ, ಗ್ರಾಮ ಪಂಚಾಯಿತಿ ಸದಸ್ಯ ಕೆ.ಪಿ. ದಿನೇಶ್, ಪ್ರೌಢಶಾಲಾ ಪ್ರಭಾರ ಮುಖ್ಯ ಶಿಕ್ಷಕ ಎಂ.ಎಂ. ಯಶವಂತಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭ ಹಿಂದಿನ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಕೆ.ಆರ್. ದರ್ಶನ್ ಹಾಗೂ ಬಿ.ಎಸ್. ಗೌತಮ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.