ನವದೆಹಲಿ: ‘ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆಯು ಅತ್ಯಂತ ಕಡಿಮೆ ಅವಧಿಯಲ್ಲಿಯೇ ಸ್ಥಿರತೆಯ ಹಾದಿಗೆ ಮರಳಿದೆ. ಇದರಿಂದಾಗಿ ಭವಿಷ್ಯದಲ್ಲಿ ತೆರಿಗೆದಾರರ ವ್ಯಾಪ್ತಿ ವಿಸ್ತರಿಸಲು ಮತ್ತು ತೆರಿಗೆ ದರಗಳನ್ನು ಇಳಿಸಲು ಸಾಧ್ಯವಾಗಲಿದೆ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದರು.
ಶನಿವಾರ ಇಲ್ಲಿ ಅಂತರರಾಷ್ಟ್ರೀಯ ಕಸ್ಟಮ್ಸ್ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಜಿಎಸ್ಟಿಯಿಂದಾಗಿ ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿ ಸಂಪೂರ್ಣ ಬದಲಾವಣೆ ಆಗಿದೆ. ಬೇರೆ ದೇಶಗಳಿಗೆ ಹೋಲಿಸಿದರೆ, ಜಿಎಸ್ಟಿ ಜಾರಿಯಾದ ಅಲ್ಪಾವಧಿಯಲ್ಲಿಯೇ ಸ್ಥಿರತೆ ಹಾದಿಗೆ ಮರಳಿದೆ’ ಎಂದು ತಿಳಿಸಿದರು.
‘ದೇಶದ ಆರ್ಥಿಕತೆ ಹಲವು ರೀತಿಯ ಬದಲಾವಣೆಗಳಿಗೆ ತೆರೆದುಕೊಳ್ಳುತ್ತಿದೆ. ಸುಧಾರಿತ ಮತ್ತು ತ್ವರಿತ ಸೇವೆಗಳನ್ನು ನೀಡಲು ತಂತ್ರಜ್ಞಾನ ಬಳಕೆಯೂ ಬಹಳ ಮುಖ್ಯವಾಗಿದೆ. ಬದಲಾವಣೆಗಳಿಗೆ ಹೊಂದಿಕೊಳ್ಳುವ ಎಲ್ಲಾ ಸಾಮರ್ಥ್ಯವನ್ನೂ ತೆರಿಗೆ ಇಲಾಖೆ ಹೊಂದಿದೆ. ಅವರು ನೀಡುವ ಸೇವೆಯಿಂದ ಅದು ಅನುಭವಕ್ಕೆ ಬರಲಿದೆ’ ಎಂದರು.
ನವೆಂಬರ್ನಲ್ಲಿ ನಡೆದ ಜಿಎಸ್ಟಿ ಮಂಡಳಿ ಸಭೆಯಲ್ಲಿ, ಆರೋಗ್ಯಕ್ಕೆ ಹಾನಿಕಾರಕವಾದ ಉತ್ಪನ್ನಗಳು ಮತ್ತು ಐಷಾರಾಮಿ ಸರಕುಗಳನ್ನು ಮಾತ್ರವೇ ಗರಿಷ್ಠ ಹಂತದ ತೆರಿಗೆ ದರದಲ್ಲಿ(ಶೇ 28) ಉಳಿಸಿಕೊಳ್ಳಲು ನಿರ್ಧರಿಸಲಾಯಿತು.
ಸುಲಲಿತ ವಹಿವಾಟು ಸೂಚ್ಯಂಕ ಏರಿಕೆ ಸಾಧ್ಯ: ಸುಲಲಿತ ವಹಿವಾಟಿಗೆ ಸಂಬಂಧಿಸಿದಂತೆ ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನವನ್ನು ಇನ್ನಷ್ಟು ಮೇಲಕ್ಕೆ ಕೊಂಡೊಯ್ಯಲು ಸಾಧ್ಯವಿದೆ ಎಂದು ಜೇಟ್ಲಿ ಹೇಳಿದರು.
ವಿಶ್ವಬ್ಯಾಂಕ್ನ 2018ರ ವಾರ್ಷಿಕ ವರದಿಯಲ್ಲಿ, 190 ದೇಶಗಳ ಪೈಕಿ ಭಾರತದ ಶ್ರೇಯಾಂಕವು 100ಕ್ಕೆ ಏರಿಕೆ ಕಂಡಿದೆ. ‘ಸುಲಲಿತ ವಹಿವಾಟು ಸೂಚ್ಯಂಕದಲ್ಲಿ ಭಾರತವನ್ನು ಮೊದಲ 50 ದೇಶಗಳ ಪಟ್ಟಿಯಲ್ಲಿ ಬರುವಂತೆ ಮಾಡಬೇಕು ಎನ್ನುವ ಗುರಿಯನ್ನು ಪ್ರಧಾನಿ ನೀಡಿದ್ದಾರೆ. 142ನೇ ಸ್ಥಾನದಲ್ಲಿದ್ದಾಗ 50ರ ಒಳಗೆ ಬರುವುದು ಬಹು ದೊಡ್ಡ ಸವಾಲಾಗುತ್ತಿತ್ತು. ಆದರೆ ಈಗ 100ನೇ ಸ್ಥಾನದಲ್ಲಿ ಇರುವುದರಿಂದ, ಎಲ್ಲರೂ ಶ್ರಮಿಸಿದರೆ ಆ ಗುರಿ ಸಾಧನೆ ಕಷ್ಟವೇನಲ್ಲ’ ಎಂದರು.
‘ಸುಲಲಿತ ವಹಿವಾಟು ಸೂಚ್ಯಂಕ ಏರಿಕೆ ಸಾಧ್ಯ’
ಸುಲಲಿತ ವಹಿವಾಟಿಗೆ ಸಂಬಂಧಿಸಿದಂತೆ ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನವನ್ನು ಇನ್ನಷ್ಟು ಮೇಲಕ್ಕೆ ಕೊಂಡೊಯ್ಯಲು ಸಾಧ್ಯವಿದೆ ಎಂದು ಜೇಟ್ಲಿ ಹೇಳಿದರು.
ವಿಶ್ವಬ್ಯಾಂಕ್ನ 2018ರ ವಾರ್ಷಿಕ ವರದಿಯಲ್ಲಿ, 190 ದೇಶಗಳ ಪೈಕಿ ಭಾರತದ ಶ್ರೇಯಾಂಕವು 100ಕ್ಕೆ ಏರಿಕೆ ಕಂಡಿದೆ.
‘ಸುಲಲಿತ ವಹಿವಾಟು ಸೂಚ್ಯಂಕದಲ್ಲಿ ಭಾರತವನ್ನು ಮೊದಲ 50 ದೇಶಗಳ ಪಟ್ಟಿಯಲ್ಲಿ ಬರುವಂತೆ ಮಾಡಬೇಕು ಎನ್ನುವ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದಾರೆ. 142ನೇ ಸ್ಥಾನದಲ್ಲಿದ್ದಾಗ 50ರ ಒಳಗೆ ಬರುವುದು ಬಹು ದೊಡ್ಡ ಸವಾಲಾಗುತ್ತಿತ್ತು. ಆದರೆ ಈಗ 100ನೇ ಸ್ಥಾನದಲ್ಲಿದ್ದೇವೆ. ತೆರಿಗೆ ಇಲಾಖೆಯನ್ನೂ ಒಳಗೊಂಡು ಎಲ್ಲರೂ ಒಟ್ಟಾರೆ ಕೆಲಸ ಮಾಡಿದರೆ ಕಷ್ಟವೇನಲ್ಲ’ ಎಂದು ಅವರು ಹೇಳಿದರು.
ವ್ಯಾಪಾರಸ್ಥರು ಮತ್ತು ಕೇಂದ್ರೀಯ ಕಸ್ಟಮ್ಸ್ ಮತ್ತು ಎಕ್ಸೈಸ್ ಮಂಡಳಿ (ಸಿಬಿಇಸಿ) ಮಧ್ಯೆ ಪರಿಣಾಮಕಾರಿ ಸಂವಹನ ಸಾಧ್ಯವಾಗಿಸುವಂಥ ಎರಡು ಜಾಲತಾಣಗಳನ್ನು(ICETRAK ಮತ್ತು ICETAB) ಬಿಡುಗಡೆ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.